ಬೆಂಗಳೂರು: ‘ಮೆಗಾ ಸಿಟಿ ಯೋಜನೆ ಹೆಸರಲ್ಲಿ ಹಣ ಪಡೆದು ನಿವೇಶನ ಹಂಚಿಕೆ ಮಾಡಿಲ್ಲ’ ಎಂಬ ಆರೋಪ ಎದುರಿಸುತ್ತಿದ್ದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಖುಲಾಸೆಗೊಳಿಸಿದೆ.
ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಸೋಮವಾರ ಪ್ರಕಟಿಸಿದರು. ‘ಈ ಪ್ರಕರಣದ ತನಿಖೆಯನ್ನು ತನಿಖಾಧಿಕಾರಿ ಅತ್ಯಂತ ಅನ್ಯಮನಸ್ಕರಾಗಿ ಮತ್ತು ಅಜಾಗರೂಕತೆಯಿಂದ ನಡೆಸಿದ್ದಾರೆ. ಹೀಗಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆ ಮಾಡಲಾಗುತ್ತಿದೆ. ಆದ್ದರಿಂದ, ಈ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ತಪ್ಪು ಎಸಗಿದ್ದು, ಅವರ ವಿರುದ್ಧ ಡಿಜಿ ಮತ್ತು ಐಜಿ ಸೂಕ್ರ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.ಆರೋಪಿಗಳಾದ ಸಿ.ಪಿ.ಯೋಗೇಶ್ವರ, ಎಸ್.ಪಿ.ಗಂಗಾಧರೇಶ್ವರ, ಪಿ.ಮಹದೇವಪ್ಪ ಮತ್ತು ಎಚ್.ಆರ್.ರಮೇಶ್ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರೋಪಿಗಳು.
‘1994ರಲ್ಲಿ ಮೆಗಾಸಿಟಿ ಯೋಜನೆ ಅಡಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಿವೇಶನ ನೀಡುವುದಾಗಿ ಸಿ.ಪಿ. ಯೋಗೇಶ್ವರ್, ಜನರಿಂದ ಹಣ ಸಂಗ್ರಹಿಸಿದ್ದರು. ನಂತರ ಹಣ ಮತ್ತು ನಿವೇಶನ ಎರಡೂ ನೀಡಲಿಲ್ಲ’ ಎಂದು ನಿವೇಶನಕ್ಕೆ ಹಣ ನೀಡಿದವರು ದೂರು ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.