ADVERTISEMENT

ಮೆಟ್ರೊ ಮಾರ್ಗದ ಕಂಬಕ್ಕೆ ಹಾನಿ: ಆತಂಕ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 19:19 IST
Last Updated 28 ಡಿಸೆಂಬರ್ 2021, 19:19 IST
ಮೆಟ್ರೊ ಮಾರ್ಗದ ಕಂಬದ ಅಡಿಪಾಯದಲ್ಲಿ ಆಗಿರುವ ಹಾನಿ ಸರಿಪಡಿಸುವ ಕಾಮಗಾರಿ ನಿರ್ವಹಿಸುತ್ತಿರುವುದು –ಪ್ರಜಾವಾಣಿ ಚಿತ್ರ
ಮೆಟ್ರೊ ಮಾರ್ಗದ ಕಂಬದ ಅಡಿಪಾಯದಲ್ಲಿ ಆಗಿರುವ ಹಾನಿ ಸರಿಪಡಿಸುವ ಕಾಮಗಾರಿ ನಿರ್ವಹಿಸುತ್ತಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿಯಿಂದ ಹಲಸೂರಿನಲ್ಲಿ ರಾಜಕಾಲುವೆ ಹೂಳು ತೆಗೆಯುವ ಸಂದರ್ಭದಲ್ಲಿ ಮೆಟ್ರೊ ರೈಲು ಮಾರ್ಗದ ಕಂಬಕ್ಕೆ ಸ್ವಲ್ಪ ಹಾನಿಯಾಗಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ರಾಜಕಾಲುವೆ ಹೊಂದಿಕೊಂಡಂತೆ ಇರುವ ಮೆಟ್ರೊ ಮಾರ್ಗದ ಕಂಬದ ಅಡಿಪಾಯ ಕಾಣುವಂತೆ ಜೆಸಿಬಿ ಮೂಲಕ ಮಣ್ಣು ತೆಗೆಯಲಾಗಿತ್ತು. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಹೂಳು ತೆಗೆಯುವಾಗ ಅಡಿಪಾಯಕ್ಕೂ ಸ್ವಲ್ಪ ಹಾನಿಯಾಗಿತ್ತು.

ಸ್ಥಳೀಯರು ಮೆಟ್ರೊ ರೈಲು ನಿಗಮದ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ ಕೂಡಲೇ ಬಿಬಿಎಂಪಿ ಅಧಿಕಾರಿಗಳ ಜೊತೆ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಂಟೆಗೆ 35 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಮೆಟ್ರೊ ರೈಲುಗಳ ವೇಗವನ್ನು ಕಾಮಗಾರಿ ನಿರ್ವಹಿಸುತ್ತಿರುವ ಸ್ಥಳದಲ್ಲಿ 25 ಕಿಲೋ ಮೀಟರ್‌ಗೆ ಇಳಿಸಲು ಸೂಚನೆ ನೀಡಲಾಯಿತು.

ADVERTISEMENT

‘ಮೆಟ್ರೊ ಕಂಬಕ್ಕೆ ಯಾವುದೇ ಹಾನಿ ಆಗಿಲ್ಲ. ಬಿಬಿಎಂಪಿ ಅಧಿಕಾರಿಗಳ ತಂಡದ ಜೊತೆ ನಾನೇ ಖುದ್ದು ಪರಿಶೀಲನೆ ನಡೆಸಿದ್ದೇನೆ. ಸುರಕ್ಷತೆಯ ದೃಷ್ಟಿಯಿಂದ ಅಡಿಪಾಯಕ್ಕೆ ತಡೆಗೋಡೆಯಂತೆ ಇನ್ನೊಂದು ಸುತ್ತಿನ ಕಾಂಕ್ರಿಟ್‌ ಹಾಕಲಾಗಿದೆ. ಯಾವುದೇ ಅಪಾಯ ಇಲ್ಲ. ಸಾರ್ವಜನಿಕರಿಗೆ ಆತಂಕ ಬೇಡ’ ಎಂದು ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ಕಾಮಗಾರಿ ನಡೆಯುವಾಗ ಕಂಬದಲ್ಲಿ ಕಂಪನ ಆಗಬಾರದು ಎಂಬ ಕಾರಣಕ್ಕೆ ರೈಲುಗಳ ವೇಗ ಕಡಿಮೆ ಮಾಡಲಾಗಿದೆ. ರಾಜಕಾಲುವೆ ಪಕ್ಕದಲ್ಲೇ ಮೆಟ್ರೊ ಕಂಬ ನಿರ್ಮಾಣ ಮಾಡುವ ಸಂದರ್ಭದಲ್ಲಿ ಎಲ್ಲ ರೀತಿಯ ಅನುಮತಿಗಳನ್ನು ಬಿಬಿಎಂಪಿಯಿಂದ ಪಡೆಯಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.