ADVERTISEMENT

ಮೆಟ್ರೊ: ಒಂದೇ ದಿನದಲ್ಲಿ ತಪಾಸಣೆ ಮುಗಿಸಿದ ಸುರಕ್ಷತಾ ಆಯುಕ್ತರು

ನಾಗಸಂದ್ರ–ಮಾದಾವರ ಮಾರ್ಗದಲ್ಲಿ ರೈಲು ಸಂಚಾರ ಸನ್ನಿಹಿತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:02 IST
Last Updated 3 ಅಕ್ಟೋಬರ್ 2024, 16:02 IST
‘ನಮ್ಮ ಮೆಟ್ರೊ’ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಿಲ್ದಾಣಗಳ ನಡುವೆ ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಗುರುವಾರ ಸುರಕ್ಷತಾ ತಪಾಸಣೆ ನಡೆಯಿತು
‘ನಮ್ಮ ಮೆಟ್ರೊ’ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಿಲ್ದಾಣಗಳ ನಡುವೆ ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಗುರುವಾರ ಸುರಕ್ಷತಾ ತಪಾಸಣೆ ನಡೆಯಿತು   

ಬೆಂಗಳೂರು: ‘ನಮ್ಮ ಮೆಟ್ರೊ’ ಹಸಿರು ಮಾರ್ಗದ ವಿಸ್ತರಿತ ಪ್ರದೇಶ ನಾಗಸಂದ್ರ–ಮಾದಾವರ ನಿಲ್ದಾಣಗಳ ನಡುವೆ ಸುರಕ್ಷತಾ ತಪಾಸಣೆಯನ್ನು ರೈಲ್ವೆ ಸುರಕ್ಷತಾ ಆಯುಕ್ತರು ಗುರುವಾರ ಒಂದೇ ದಿನದಲ್ಲಿ ಪೂರ್ಣಗೊಳಿಸಿದ್ದಾರೆ.

ರೈಲ್ವೆ ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್‌ ಮಧುಕರ್‌ ಚೌಧರಿ, ಉಪ ಆಯುಕ್ತ ನಿತೀಶ್‌ ಕುಮಾರ್‌ ರಂಜನ್‌ ಮತ್ತು ತಾಂತ್ರಿಕ ತಂಡವು ಮಂಜುನಾಥನ ನಗರ, ಚಿಕ್ಕಬಿದರಕಲ್ಲು (ಜಿಂದಾಲ್) ಮತ್ತು ಮಾದಾವರ ಮೆಟ್ರೊ ನಿಲ್ದಾಣಗಳ ತಪಾಸಣೆ, ಹಳಿಗಳ ತಪಾಸಣೆ, ಸಿಗ್ನಲಿಂಗ್‌ ಪರಿಶೀಲನೆ, ಸಾಮರ್ಥ್ಯ ಪರೀಕ್ಷೆ ಸಹಿತ ವಿವಿಧ ಪರೀಕ್ಷೆಗಳನ್ನು ನಡೆಸಿತು. ತಾಂತ್ರಿಕ ತಂಡ ಮತ್ತು ದಾಖಲೆ ಪರಿಶೀಲನೆ ತಂಡಗಳು ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ತಪಾಸಣೆಗಳನ್ನು ನಡೆಸಿದವು.

‘ಗುರುವಾರ ಮತ್ತು ಶುಕ್ರವಾರ ಪರಿಶೀಲನೆಗೆ ದಿನ ನಿಗದಿಯಾಗಿತ್ತು. ಒಂದೇ ದಿನದಲ್ಲಿ ಪರೀಕ್ಷೆಗಳನ್ನು ನಡೆಸಿದ ತಂಡವು ವಿಸ್ತರಿತ ಮಾರ್ಗದ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಕೆಲವು ಸಣ್ಣ ಸಣ್ಣ ಬದಲಾವಣೆಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಕೆಲವೇ ದಿನಗಳಲ್ಲಿ ವಾಣಿಜ್ಯ (ಸಾರ್ವಜನಿಕ) ಸಂಚಾರಕ್ಕೆ ಅನುಮತಿ ಸಿಗುವ ನಿರೀಕ್ಷೆ ಇದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ಪತ್ರ ಬಂದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿದ ದಿನ ಮೆಟ್ರೊ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಗಸಂದ್ರ–ಮಾದಾವರ ಮೆಟ್ರೊ ಮಾರ್ಗದಲ್ಲಿ ಗುರುವಾರ ಸುರಕ್ಷತಾ ತಪಾಸಣೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.