ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಮೊದಲ ವಿಸ್ತರಿತ ಮಾರ್ಗ ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆಯವರೆಗೆ ಶುಕ್ರವಾರದಿಂದ ಮೆಟ್ರೊ ರೈಲು ಸಂಚಾರ ಆರಂಭವಾಯಿತು.
ರೇಷ್ಮೆ ಸಂಸ್ಥೆಯಿಂದ ನಾಗಸಂದ್ರದ ಕಡೆಗೆ ಮೊದಲ ರೈಲು ಬೆಳಿಗ್ಗೆ 7ಕ್ಕೆ ಹೊರಟಿತು. ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು. ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು 8.55ಕ್ಕೆ, ನಾಗಸಂದ್ರದಿಂದ ಕೊನೆಯ ರೈಲು ರಾತ್ರಿ 9 ಕ್ಕೆ ಹೊರಡಲಿದೆ. ಈ ಮಾರ್ಗದಲ್ಲಿ ದಟ್ಟಣೆಯ ಅವಧಿಯಲ್ಲಿ 10 ನಿಮಿಷಕ್ಕೊಂದು, ದಟ್ಟಣೆ ಇಲ್ಲದ ಸಮಯದಲ್ಲಿ 15 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ.
‘ವಾಹನದಟ್ಟಣೆ, ಮಾಲಿನ್ಯ, ಸಮಯ ವ್ಯಯದಂತಹ ಸಮಸ್ಯೆಗಳು ಈಗ ಇಲ್ಲ. ಕನಕಪುರ ರಸ್ತೆಯಲ್ಲಿ ರೈಲು ಮಾರ್ಗ ವಿಸ್ತರಿಸುವುದರಿಂದ ತುಂಬಾ ಅನುಕೂಲವಾಗಿದೆ’ ಎಂದು ಪ್ರಯಾಣಿಕ ಡಾ. ಎ.ಭಾನು ಹೇಳಿದರು.
ಪಾರ್ಕಿಂಗ್ ವ್ಯವಸ್ಥೆ: ಹೊಸದಾಗಿ ಕಾರ್ಯಾರಂಭಿಸಿರುವ ಐದು ನಿಲ್ದಾಣಗಳಲ್ಲಿ ಬಿಎಂಆರ್ ಸಿಎಲ್ ವತಿಯಿಂದ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಿಲ್ಲ. ಆದರೆ, ಕೋಣನಕುಂಟೆ ಕ್ರಾಸ್ ನಲ್ಲಿ ಖಾಸಗಿ ಕಂಪನಿಯು ಹಣ ಪಾವತಿಸಿ, ವಾಹನ ನಿಲುಗಡೆ ಮಾಡುವ ಸೌಲಭ್ಯ ಕಲ್ಪಿಸಿದೆ.
ಫ್ರಂಟಿಯರ್ ಪಾರ್ಕಿಂಗ್ ಕಂಪನಿ ಈ ಗುತ್ತಿಗೆ ಪಡೆದುಕೊಂಡಿದೆ. ಕಾರುಗಳಿಗೆ ದಿನಕ್ಕೆ ₹60, ದ್ವಿಚಕ್ರ ವಾಹನಗಳಿಗೆ ದಿನಕ್ಕೆ ₹30 ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗಿದೆ. ಗಂಟೆಗಳ ಲೆಕ್ಕದಲ್ಲಿಯೂ ವಾಹನ ನಿಲ್ಲಿಸಬಹುದಾಗಿದ್ದು, ಬೈಕ್ ಗೆ ಪ್ರತಿ ತಾಸಿಗೆ ₹5, ಕಾರುಗಳಿಗೆ ₹10 ಶುಲ್ಕ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.