ADVERTISEMENT

ಕೆ.ಆರ್.ಪುರ: ನಾಗರಿಕರಿಗೆ ದೊರೆಯದ ಮೆಟ್ರೊ– ನಿಲ್ದಾಣ ತಲುಪಲು ಹರಸಾಹಸ

ಶಿವರಾಜು ಮೌರ್ಯ
Published 11 ಜುಲೈ 2023, 20:50 IST
Last Updated 11 ಜುಲೈ 2023, 20:50 IST
ಕೆ.ಆರ್.ಪುರ ಮೆಟ್ರೊ ನಿಲ್ದಾಣ.
ಕೆ.ಆರ್.ಪುರ ಮೆಟ್ರೊ ನಿಲ್ದಾಣ.   

ಕೆ.ಆರ್.ಪುರ: ಮಹದೇವಪುರ ಹಾಗೂ ಕೆ.ಆರ್.ಪುರ ಕ್ಷೇತ್ರದ ಸುತ್ತಮುತ್ತಲಿನ ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದಿಂದ ಆರಂಭವಾದ ಮೆಟ್ರೊ ರೈಲು ಸೇವೆ ಕೆ.ಆರ್.ಪುರ ಭಾಗದ ಜನರಿಗೆ ದೊರೆಯುತ್ತಿಲ್ಲ.

ಬಹುಬೇಡಿಕೆಯ ಮಾರ್ಗವಾಗಿರುವ ಕೆ.ಆರ್.ಪುರ- ವೈಟ್ ಫೀಲ್ಡ್ (ಕಾಡುಗೋಡಿ) ನೇರಳೆ ಮಾರ್ಗವನ್ನು ಕೆಲ ತಿಂಗಳುಗಳ ಹಿಂದೆ ಪ್ರಧಾನಿ ಉದ್ಘಾಟಿಸಿದ್ದರು.

ಹಳೆ ಮದ್ರಾಸ್ ರಸ್ತೆಯಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಗೆ ಪರಿಹಾರವಾಗಿ ಮೆಟ್ರೊ ಸೇವೆ ವರದಾನವಾಗಿದೆ. ಆದರೆ, ಕೆ.ಆರ್.ಪುರ, ಟಿ.ಸಿ‌.ಪಾಳ್ಯ, ರಾಮಮೂರ್ತಿನಗರ, ದೇವಸಂದ್ರ, ಮೇಡಿಹಳ್ಳಿ, ವಿಜಿನಾಪುರ ಭಾಗದ ಜನರು ಮೆಟ್ರೊ ನಿಲ್ದಾಣ ತಲುಪಲು ಹರಸಾಹಸ ಪಡಬೇಕಿದೆ.

ADVERTISEMENT

ವೈಟ್‌ಫೀಲ್ಡ್ ಕಡೆ ತೆರಳುವ ಮೆಟ್ರೊಗೆ ತೆರಳಲು ಟಿನ್ ಫ್ಯಾಕ್ಟರಿ ಬಳಿಯಿಂದ ಕೆ.ಆರ್.ಪುರ ರೈಲು ನಿಲ್ದಾಣ ಮೂಲಕ ಮೆಟ್ರೊ ನಿಲ್ದಾಣಕ್ಕೆ ತಲುಪಬೇಕು. ಕೆ.ಆರ್.ಪುರದಿಂದ ಮೆಟ್ರೊ ನಿಲ್ದಾಣಕ್ಕೆ ತಲುಪಲು ಪರ್ಯಾಯವಾಗಿ ಕನಿಷ್ಠ ಮೂವತ್ತು ನಿಮಿಷ ಹಿಡಿಯುತ್ತದೆ.

ಕೆ.ಆರ್‌.ಪುರದಿಂದ ಮೆಟ್ರೊ ನಿಲ್ದಾಣಕ್ಕೆ ಹೋಗಲು ಐಟಿಐ ಬಳಿಯ ತೂಗುಸೇತುವೆ ಮೂಲಕ ಬಸ್‌ನಲ್ಲಿ ತೆರಳಿ ಟಿನ್ ಫ್ಯಾಕ್ಟರಿ ಮೂಲಕ ತೆರಳಿದರೆ ಮೆಟ್ರೊ ನಿಲ್ದಾಣ ತಲುಪಲು ಸುತ್ತುವರಿದು ಎರಡು ಕಿ.ಮೀ ಸಂಚಾರ ಮಾಡಬೇಕಿದೆ. ಇನ್ನೂ ಐಟಿಐನ ರೈಲ್ವೆ ಕೇಳಸೇತುವೆ ಬಳಿಯಿಂದ ತಲುಪಲು ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ವೇಳೆ ಒಂದು ಕಿಮೀ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ.

ಕೆ.ಆರ್.ಪುರ ಸುತ್ತಮುತ್ತಲಿನ ಪ್ರದೇಶಗಳಿಂದ ಫ್ಯಾಕ್ಟರಿ ಬಳಿ ಇರುವ ಮೆಟ್ರೊ ನಿಲ್ದಾಣ ತಲುಪಲು ಕೆ.ಆರ್.ಪುರ ಭಾಗದ ಜನರು ತೂಗು ಸೇತುವೆ ಅಥವಾ ಐಟಿಐನ ರೈಲ್ವೆ ಕೇಳಸೇತುವೆ ಅನುಸರಿಸಬೇಕು. ರೈಲ್ವೆ ಕೆಳಸೇತುವೆಯಿಂದ ತೆರಳಿದರೆ ಇಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಹಾಗೂ ತೂಗು ಸೇತುವೆ ಮೂಲಕ ತೆರಳಿದರೆ ಎರಡು ಕಿಮೀ ದೂರ ಸಾಗಬೇಕು ಎಂದು ಕೆ.ಆರ್.ಪುರದ ನಿವಾಸಿ ಕೆ.ಪಿ.ಕೃಷ್ಣ  ಹೇಳುತ್ತಾರೆ.

‘ತೂಗು ಸೇತುವೆ ಮೂಲಕ ಸಂಚಾರ ಮಾಡಲು ಬಸ್ ಹಿಡಿಯಬೇಕು. ಜತೆಗೆ, ಮೆಟ್ರೊ ನಿಲ್ದಾಣ ತಲುಪಲು ಎರಡು ಕಿಮೀ ದೂರದ ಸಂಚಾರವೂ ಸಾಹಸಮಯವಾಗಿದೆ. ತೂಗು ಸೇತುವೆ ಪಕ್ಕದ ಕೆ.ಆರ್.ಪುರ ರೈಲ್ವೆ ನಿಲ್ದಾಣ ಬಳಿಯ ಐಟಿಐ ಮೈದಾನದ ಜಾಗದಲ್ಲಿ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಸೇತುವೆಯಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಿದರೆ ಜನರು ಇಲ್ಲಿಂದ ರಸ್ತೆ ದಾಟಲು ಸುಗಮವಾಗುತ್ತದೆ. ಇಲ್ಲಿಯೇ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಉತ್ತಮ’ ಎಂದು ಅವರು ಹೇಳುತ್ತಾರೆ.

‘ವೈಟ್ ಫೀಲ್ಡ್ ಕಡೆಗೆ ತೆರಳಲು ನಿತ್ಯ ಸಂಚಾರ ದುಸ್ತರವಾಗಿದೆ. ಐಟಿಐ ಮೈದಾನವಿರುವ ಪ್ರದೇಶದಲ್ಲಿ ಮೆಟ್ರೊ ನಿಲ್ದಾಣಕ್ಕೆ ಪಾದಚಾರಿ ಮಾರ್ಗ ನಿರ್ಮಾಣವಾದರೆ ರಸ್ತೆ ದಾಟಲು ಅನುಕೂಲವಾಗುತ್ತದೆ’ ಎಂದು ಪ್ರಯಾಣಿಕ ಶಿವಕುಮಾರ್ ಸಂಗನ್ ತಿಳಿಸಿದರು.

ಕೆ.ಪಿ.ಕೃಷ್ಣ ಕೆ.ಆರ್.ಪುರ ನಿವಾಸಿ
ಶಿವಕುಮಾರ್ ಸಂಗನ್ ಮೆಟ್ರೊ ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.