
ಬೆಂಗಳೂರಿನಲ್ಲಿ ಎಕೆಎಂಐ ಆಯೋಜಿಸಿದ್ದ ಮೈಕ್ರೊ ಫೈನಾನ್ಸ್ ಕರ್ನಾಟಕ ಸಮ್ಮಿಟ್–2026 ಉದ್ಘಾಟನೆ ಕಾರ್ಯಕ್ರಮದಲ್ಲಿ ಆರ್ಬಿಐ ಮೇಲ್ವಿಚಾರಣಾ ವಿಭಾಗದ ಡಿಜಿಎಂ ಧರ್ಮೇಂದ್ರ ರಾಮಜಿ ಭಾಯಿ ಬಗದ ಮಾತನಾಡಿದರು.
ಪ್ರಜಾವಾಣಿ ಚಿತ್ರ.
ಬೆಂಗಳೂರು: ‘ಮೈಕ್ರೋ ಫೈನಾನ್ಸ್ಗಳು ಬಾಕಿ ವಸೂಲಿ ಹೆಸರಿನಲ್ಲಿ ಕಿರುಕುಳ ನೀಡುವುದನ್ನು ತಪ್ಪಿಸಿ ಸ್ವಯಂ ನಿಯಂತ್ರಣದೊಂದಿಗೆ ವಹಿವಾಟು ನಡೆಸಬೇಕು’ ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿ ಆರ್.ವಿಶಾಲ್ ಸಲಹೆ ನೀಡಿದರು.
ನಗರದಲ್ಲಿ ಬುಧವಾರ ನಡೆದ ಮೈಕ್ರೋ ಫೈನಾನ್ಸ್ ಕರ್ನಾಟಕ ಶೃಂಗಸಭೆ–2026ನಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ದೇಶದ ಹಲವು ಕಡೆಗಳಲ್ಲಿ ಕಿರುಕುಳ ಪ್ರಕರಣ ವರದಿಯಾಗಿದ್ದವು. ಕರ್ನಾಟಕದಲ್ಲೂ ಈ ಸಂಖ್ಯೆ ಹೆಚ್ಚಿದ್ದವು’ ಎಂದರು.
‘ಫೈನಾನ್ಸ್ಗಳ ವಹಿವಾಟಿನ ಮೇಲೆ ನಿಯಂತ್ರಣ ಇಡಲೆಂದೇ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ. ಯಾವುದೇ ವ್ಯವಸ್ಥೆ ಬೆಳೆಯಬೇಕಾದರೆ ಅಡಿಪಾಯವನ್ನು ಗಟ್ಟಿಯಾಗಿಸಬೇಕು. ಮೈಕ್ರೋ ಫೈನಾನ್ಸ್ ಸಮಾಜದಲ್ಲಿ ಅವಕಾಶವಂಚಿತ ಸಮುದಾಯಗಳಿಗೆ ಆರ್ಥಿಕ ಬಲ ತುಂಬುವ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆ ಕುಸಿದರೆ ಆರ್ಥಿಕ ಏರುಪೇರು ಆಗಲಿದ್ದು ಸರ್ಕಾರದ ಮೇಲೂ ಪರಿಣಾಮ ಬೀರಲಿದೆ’ ಎಂದು ಹೇಳಿದರು.
‘ಮೈಕ್ರೋ ಫೈನಾನ್ಸ್ ವಲಯ ಮುಂದಿನ ಮೂರ್ನಾಲ್ಕು ದಶಕದಲ್ಲಿ ಹೇಗೆ ಬೆಳೆಯಬೇಕು ಎನ್ನುವ ಕುರಿತು ನೀಲನಕ್ಷೆಯನ್ನು ಸಿದ್ದಪಡಿಸಿ. ಬಡ್ಡಿ ದರ, ಸಾಲ ನೀಡಿಕೆ, ವಸೂಲಾತಿ ಮಾರ್ಗಗಳ ಕುರಿತು ಈ ವಲಯದಲ್ಲಿ ಕೆಲಸ ಮಾಡುವವರು ಚರ್ಚಿಸಿ ಆರ್ಥಿಕ ವ್ಯವಸ್ಥೆ ಬಲಪಡಿಸಿ’ ಎಂದು ಸಲಹೆ ನೀಡಿದರು.
ಮೈಕ್ರೋ ಫೈನಾನ್ಸ್ ಒಳಗೊಳ್ಳುವಿಕೆ ಅಭಿವೃದ್ದಿ, ಉದ್ಯೋಗ, ಗ್ರಾಮೀಣ ಆರ್ಥಿಕ ಬಲಪಡಿಸುವ ಮಾರ್ಗೋಪಾಯಗಳು, ಗ್ರಾಮೀಣ ಜೀವನೋಪಾಯಕ್ಕೆ ಬೆಂಬಲ ನೀಡುವ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಐಐಎಂ ಪ್ರಾಧ್ಯಾಪಕ ಎಂ.ಎಸ್.ಶ್ರೀರಾಮ್, ‘ಯಾವುದೇ ವಲಯದಲ್ಲಿ ಬಿಕ್ಕಟ್ಟು ಮೂರ್ನಾಲ್ಕು ವರ್ಷಗಳಿಗೊಮ್ಮೆ ಇದ್ದೇ ಇರುತ್ತದೆ. ಮೈಕ್ರೋ ಫೈನಾನ್ಸ್ ವಲಯವೂ ಇಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಸುಸ್ಥಿರವಾಗಿ ಬೆಳೆಯುತ್ತಲಿದೆ. ಸ್ವಯಂ ನಿಯಂತ್ರಣ ಹಾಕಿಕೊಂಡು ಮುಂದಡಿ ಇಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.