ADVERTISEMENT

ಹಾಲಿನ ದರ ಹೆಚ್ಚಳ ಲಾಭ ರೈತರಿಗೆ: ಬಮೂಲ್ ಅಧ್ಯಕ್ಷ ಎಚ್.ಪಿ.ರಾಜಕುಮಾರ್

₹3 ಏರಿಕೆ ಆ.1ರಿಂದ ಅನ್ವಯ: ಬಮೂಲ್‌ ಅಧ್ಯಕ್ಷ ರಾಜಕುಮಾರ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 15:31 IST
Last Updated 24 ಜುಲೈ 2023, 15:31 IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಮೂಲ್ ಅಧ್ಯಕ್ಷ ಎಚ್.ಪಿ.ರಾಜಕುಮಾರ್ ಮತ್ತು ಉಪಾಧ್ಯಕ್ಷ ಮಂಜುನಾಥ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಮೂಲ್ ಅಧ್ಯಕ್ಷ ಎಚ್.ಪಿ.ರಾಜಕುಮಾರ್ ಮತ್ತು ಉಪಾಧ್ಯಕ್ಷ ಮಂಜುನಾಥ್   

ಬೊಮ್ಮನಹಳ್ಳಿ: ‘ಪ್ರತಿ ಲೀಟರ್ ಹಾಲಿನ ದರವನ್ನು ₹3 ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದು, ಆಗಸ್ಟ್ 1 ರಿಂದ ಅನ್ವಯವಾಗಲಿದೆ’ ಎಂದು ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಅಧ್ಯಕ್ಷ ಎಚ್.ಪಿ.ರಾಜಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬಮೂಲ್ ವ್ಯಾಪ್ತಿಯಲ್ಲಿ 2275 ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು, 1,11,547 ಸದಸ್ಯರು ಪ್ರತಿ ದಿನ 16 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದಾರೆ. ಇದರಲ್ಲಿ ಶೇ 40ರಷ್ಟು ಮಹಿಳೆಯರಿದ್ದಾರೆ. ಕೆಲ ಖಾಸಗಿ ಕಂಪನಿಗಳು ಹೆಚ್ಚಿನ ಮೊತ್ತದ ದರ ನೀಡಿ ಹಾಲು ಖರೀದಿ ಮಾಡುತ್ತಿರುವುದರಿಂದ ಬಮೂಲ್ ಹಾಲು ಸಂಗ್ರಹ ಕುಸಿತವಾಗಿದೆ. ಮಾರುಕಟ್ಟೆ ಪೈಪೋಟಿ ಎದುರಿಸಲು ದರ ಹೆಚ್ಚಳದ ಪೂರ್ತಿ ಲಾಭವನ್ನು ರೈತರಿಗೆ ನೀಡಲಾಗುವುದು’ ಎಂದರು.

‘ಸದ್ಯ ಪ್ರತಿ ಲೀಟರ್‌ಗೆ ₹31.50 ರೈತರಿಗೆ ನೀಡಲಾಗುತ್ತಿದೆ. ಆಗಸ್ಟ್ 1 ರಿಂದ ₹34.50ರಂತೆ ದರ ನಿಗದಿಯಾಗಲಿದೆ. ರೈತರು ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ದರ ಏರಿಕೆ ಮಾಡಲಾಗಿದ್ದು, ಇದರಲ್ಲಿ ಮಂಡಳಿಯು ಯಾವುದೇ ಪಾಲು ಪಡೆಯುವುದಿಲ್ಲ’ ಎಂದು ವಿವರಿಸಿದರು.

ADVERTISEMENT

‘₹5 ದರ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿತ್ತು. ರೈತರ ಲಾಭದ ಜತೆಗೆ ಗ್ರಾಹಕರಿಗೂ ಹೊರೆಯಾಗದಂತೆ ₹3 ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

‘ದರ ಏರಿಕೆಯ ನಂತರವೂ ದೇಶದಲ್ಲೇ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿರುವ ಸಂಸ್ಥೆ ನಮ್ಮದು. ಸದ್ಯ ಗುಜರಾತ್‌ನಲ್ಲಿ ₹52, ಆಂಧ್ರಪ್ರದೇಶದಲ್ಲಿ ₹56, ದೆಹಲಿಯಲ್ಲಿ ₹54, ಕೇರಳದಲ್ಲಿ ₹50, ಮಹಾರಾಷ್ಟ್ರದಲ್ಲಿ ₹54 ದರ ನಿಗದಿಪಡಿಸಲಾಗಿದೆ. ಸಹಕಾರ ಸಂಸ್ಥೆಯಾಗಿ ಲಾಭವೇ ಮುಖ್ಯವಾಗಬಾರದು, ಸಮಸ್ತ ಫಲಾನುಭವಿಗಳ ಹಿತ ಕಾಯುವುದು ಮುಖ್ಯ’ ಎಂದು ಬಮೂಲ್ ಉಪಾಧ್ಯಕ್ಷ ಎಂ. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.