ಬೆಂಗಳೂರು: ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲಸಂದ್ರದ ಪೈಪ್ಲೈನ್ ರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್ಎಸ್ಬಿ) ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಂದಿನಿ ಮಿಲ್ಕ್ ಪಾರ್ಲರ್ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಜಾಗವು ಮೊದಲು ಅಂಗವಿಕಲರಾಗಿರುವಟಿ.ಆರ್. ಜೈಕೃಷ್ಣ ಅವರಿಗೆ ಮೊದಲು ಮಂಜೂರಾಗಿತ್ತು. ನಂತರ, ಈ ಜಾಗದಲ್ಲಿ ಸಂಜೀವಿನಿ ನಗರದ ಶ್ರುತಿಅವರು ಇಲ್ಲಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಆದರೆ, ಜಲಮಂಡಳಿ ಸ್ಥಳ ಮಂಜೂರಾತಿಯನ್ನು ರದ್ದುಗೊಳಿಸಿ,ತಕ್ಷಣವೇ ಈ ಜಾಗದಲ್ಲಿ ನಿರ್ಮಿಸಿದ್ದ ನಂದಿನಿ ಮಿಲ್ಕ್ ಪಾರ್ಲರ್ ಅನ್ನು ತೆರವುಗೊಳಿಸುವಂತೆ ಸೂಚಿಸಿತ್ತು ಎಂದು ಸ್ಥಳೀಯರಾದ ಪವನ್ ಹಾಗೂ ಮತ್ತಿತರರು ದೂರಿದ್ದಾರೆ.
ನಂದಿನಿ ಪಾರ್ಲರ್ಗೆ ಸ್ಥಳಾವಕಾಶ ಒದಗಿಸಲು ಸಾಧ್ಯವಿಲ್ಲ ಎಂದು ಜಲಮಂಡಳಿ ಕೆಎಂಎಫ್ಗೆ ಪತ್ರ ಸಹ ಬರೆದಿತ್ತು. ಈ ಸ್ಥಳದಲ್ಲಿ ನಂದಿನಿ ಪಾರ್ಲರ್ ತೆರೆಯಲು ಅವಕಾಶ ನೀಡಿದರೆ 110 ಹಳ್ಳಿಯ ವ್ಯಾಪ್ತಿಗೆ ಒಳಗೊಂಡಂತೆ ಕಾಮಗಾರಿಗಳು ಹಾಗೂ ನಿರ್ವಹಣೆಗೆ ಕಷ್ಟಕರವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.
ಈ ಬಗ್ಗೆ ಶಾಸಕ ಆರ್. ಮಂಜುನಾಥ್ ಅವರು ಸಹ, ತಮ್ಮ ಕ್ಷೇತ್ರದ ವಾರ್ಡ್ ನಂ.15ರಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಪೈಪ್ಲೈನ್ ಸ್ವತ್ತಿನಲ್ಲಿ ತಾತ್ಕಾಲಿಕ ನಂದಿನಿ ಪಾರ್ಲರ್ ನಿರ್ಮಿಸಲು ನೀಡಿರುವ ಸ್ಥಳ ಮಂಜೂರಾತಿಯನ್ನು ಹಿಂಪಡೆಯುವಂತೆ ಪತ್ರ ಬರೆದಿದ್ದರು.
ಶ್ರುತಿ ಅವರು ತಮ್ಮ ವೈಯಕ್ತಿಕ ಲಾಭಗೋಸ್ಕರ ನಂದಿನಿ ಪಾರ್ಲರ್ ಮಾಲೀಕತ್ವವನ್ನು ಬೇರೆಯವರಿಗೆ ಹಸ್ತಾಂತರಿಸಿರುವುದಾಗಿ ಸ್ಥಳೀಯರು ದೂರು ನೀಡಿರುವುದರಿಂದ ಸ್ಥಳ ಮಂಜೂರಾತಿಯನ್ನು ಹಿಂಪಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.