ADVERTISEMENT

‘ಸಿರಿಧಾನ್ಯಗಳಿಗೆ ಕೆಎಂಎಫ್‌ ಮಾದರಿಯ ಮಾರುಕಟ್ಟೆ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 20:28 IST
Last Updated 18 ನವೆಂಬರ್ 2018, 20:28 IST

ಬೆಂಗಳೂರು: ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಂದೇ ಜಾಲದೊಳಗೆ ತಂದು ಕರ್ನಾಟಕ ಹಾಲು ಒಕ್ಕೂಟದ ಮಾದರಿಯಲ್ಲಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಸರ್ಕಾರ ಪ್ರಸ್ತಾವನೆ ರೂಪಿಸುತ್ತಿದೆ.

‘ಸಿರಿಧಾನ್ಯ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ರೂಪಿಸಲು ಮುಂದಾಗಿದೆ. ಸದ್ಯ ರಾಜ್ಯದಲ್ಲಿ ಸಾವಯವ ರೈತರ 15 ಸಂಘಟನೆಗಳಿದ್ದು ಅವುಗಳನ್ನು ಒಂದೇ ಒಕ್ಕೂಟದಡಿ ತಂದು ಮಾರುಕಟ್ಟೆ ಒದಗಿಸುವ ಉದ್ದೇಶ ನಮ್ಮದು’ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಪತ್ರಕರ್ತರಿಗೆ ತಿಳಿಸಿದರು.

‘ಪ್ರತಿ ದಿನ ಬೆಳಿಗ್ಗೆ ಗ್ರಾಹಕರ ಮನೆಗಳಿಗೆ ಹೇಗೆ ಹಾಲನ್ನು ತಲುಪಿಸಲಾಗುವುದೋ ಅದೇ ರೀತಿ ಸಿರಿಧಾನ್ಯ ತಲುಪಿಸುವ ಆಶಯ ನಮ್ಮದು. ಒಂದೇ ಬ್ರ್ಯಾಂಡ್‌ ಹಾಗೂ ಒಂದೇ ಲೋಗೋ ಅಡಿಯಲ್ಲಿ ಈ ಉತ್ಪನ್ನಗಳನ್ನು ತಲುಪಿಸಲಾಗುವುದು. ಇದಕ್ಕೆ ಸ್ವಲ್ಪ ಸಮಯಾವಕಾಶ ಹಿಡಿಯಲಿದೆ’ ಎಂದರು.

ADVERTISEMENT

ಸಿರಿಧಾನ್ಯಗಳಿಗೆ ವಿಪರೀತ ಬೇಡಿಕೆ ಇದೆ. ಆದರೆ, ಮಾರಾಟ ಬೆಲೆ ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೂ ಮಿಲ್‌ಗಳಲ್ಲಿ ಕೆ.ಜಿಗೆ ₹ 100– 110 ಇದೆ. ರೈತರಿಗೆ ಅವರು ಕೊಡುವುದು ₹20 ಮಾತ್ರ. ಈ ಅಂತರ ಕಡಿಮೆ ಮಾಡುವ ಉದ್ದೇಶದಿಂದ ರೈತರು- ಗ್ರಾಹಕರ ನಡುವೆ ನೇರ ಸಂಪರ್ಕ ಏರ್ಪಡಿಸುವುದು ಸರ್ಕಾರದ ಚಿಂತನೆ ಎಂದರು.

ರಾಜ್ಯದ 19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಕಳೆದ ವರ್ಷ ರಾಗಿ ಮತ್ತು ಜೋಳ ಸೇರಿದಂತೆ 29.2 ಲಕ್ಷ ಟನ್‌ ಬೆಳೆಯಲಾಗಿತ್ತು. ರಾಜ್ಯದಲ್ಲಿ ಜನವರಿ 18ರಿಂದ ಮೂರು ದಿನ ಅಂತರರಾಷ್ಟ್ರೀಯ ಸಾವಯವ ಕೃಷಿ ಉತ್ಪನ್ನ, ಸಿರಿ ಧಾನ್ಯಗಳ ಅಂತರರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.