ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಲ್ಲಿ ಪೊಲೀಸರ ವೈಫಲ್ಯವಿಲ್ಲ. ಆದರೆ, ಪೊಲೀಸರು ಪಡೆಗಳು ಪ್ರವೇಶಿಸದಂತೆ ತಡೆದ ಗಲಭೆಕೋರರು ವ್ಯವಸ್ಥಿತವಾಗಿ ಹಿಂಸಾಕೃತ್ಯ ನಡೆಸಿದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.
ಗಲಭೆಗೆ ಪೊಲೀಸರ ವೈಫಲ್ಯವೇ ಕಾರಣವೆಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪವನ್ನು ತಿರಸ್ಕರಿಸಿದ ಮಾಧುಸ್ವಾಮಿ, ಬೆಂಗಳೂರಿನಲ್ಲಿ ಬೆಂಕಿ ಹಚ್ಚಿ ಪುಂಡಾಟಿಕೆ ನಡೆಸುವ ಶಕ್ತಿಗಳನ್ನು ಬೆಂಬಲಿಸಬೇಡಿ. ಮುಂದೆ ಪರಿಸ್ಥಿತಿ ಕಷ್ಟವಾಗುತ್ತದೆ ಎಂದು ಹೇಳಿದರು.
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗುತ್ತಿದ್ದಂತೆ ಹೆಚ್ಚಿನ ಪೊಲೀಸ್ ಪಡೆಗಳನ್ನು ಕರೆಸಲು ಸಂದೇಶ ಕಳಿಸಲಾಯಿತು. ಆದರೆ, ಪೊಲೀಸ್ ವಾಹನಗಳು ಗಲಭೆ ಪ್ರದೇಶಕ್ಕೆ ತಲುಪದಂತೆ ವ್ಯವಸ್ಥಿತವಾಗಿ ಎಲ್ಲ ರಸ್ತೆಗಳಲ್ಲೂ ತಡೆ ಒಡ್ಡಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಸೇರಿ ಹಲವರ ಮನೆಗಳನ್ನು ಹುಡುಕಿ ಹುಡುಕಿ ಸುಟ್ಟು ಹಾಕಿದರು. ಪೊಲೀಸರನ್ನು ಹೊರತುಪಡಿಸಿ ಗಲಭೆಯಲ್ಲಿ ಗಾಯಗೊಂಡ ಇತರ ಯಾವುದೇ ವ್ಯಕ್ತಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿಲ್ಲ. ಇದನ್ನು ನೋಡಿದರೆ, ವ್ಯವಸ್ಥಿತ ಸಂಚು ಹೇಗಿದೆ ಎಂಬುದನ್ನು ಊಹಿಸಬಹುದು ಎಂದರು.
ಗಲಭೆ ನಡೆಸುತ್ತಿರುವ ವ್ಯಕ್ತಿಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಇವರನ್ನು ಅಮಾಯಕರು ಎನ್ನುತ್ತೀರೇ ಎಂದು ಮಾಧುಸ್ವಾಮಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.