ADVERTISEMENT

ಮಹಿಳೆಗೆ ಪುರುಷನೂ ಬಲ: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:45 IST
Last Updated 8 ಮಾರ್ಚ್ 2020, 20:45 IST
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ದಾಕ್ಷಾಯಿಣಿ, ಕಸ್ತೂರಿ, ಸಂಗೀತಾ ವಿನೋದ ದೇವದಾಸ, ಬಿ.ಎ. ಅಭಿನೇತ್ರಿ ಅವರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಉದಯ ಬಿ.ಗರುಡಾಚಾರ್‌, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಬಾಲಭವನ ಅಧ್ಯಕ್ಷೆ ಚಿಕ್ಕಮ್ಮ ಹಾಗೂ ಇತರರು ಇದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ದಾಕ್ಷಾಯಿಣಿ, ಕಸ್ತೂರಿ, ಸಂಗೀತಾ ವಿನೋದ ದೇವದಾಸ, ಬಿ.ಎ. ಅಭಿನೇತ್ರಿ ಅವರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಉದಯ ಬಿ.ಗರುಡಾಚಾರ್‌, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಬಾಲಭವನ ಅಧ್ಯಕ್ಷೆ ಚಿಕ್ಕಮ್ಮ ಹಾಗೂ ಇತರರು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಂತೆ, ಯಶಸ್ವಿ ಮಹಿಳೆಯ ಜೊತೆಗೆ ಪುರುಷನೂ ಇರುತ್ತಾನೆ. ಮಹಿಳೆ ಮತ್ತು ಪುರುಷ ಒಂದೇ ನಾಣ್ಯದ ಎರಡು ಮುಖಗಳು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಧಕಿಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆ ಎಲ್ಲ ರಂಗಗಳಲ್ಲೂ ಅವಕಾಶ ವಂಚಿತಳಾಗಿದ್ದಳು. ಮಗು ಜನಿಸಿದ ಕೂಡಲೇ ಹೆಣ್ಣೋ ಅಥವಾ ಗಂಡೋ ಎಂಬ ಪ್ರಶ್ನೆ ಕೇಳುತ್ತಾರೆ. ಹೆಣ್ಣೆಂದರೆ ಹೊರೆಯಾಗಿ ಸ್ವೀಕರಿಸುವ ಮನೋಭಾವ ತೊಲಗಬೇಕು’ ಎಂದರು.

ADVERTISEMENT

ಶಾಸಕ ಉದಯ ಬಿ.ಗರುಡಾಚಾರ್, ‘ಪುರುಷರ ಸಾಧನೆಗೆ ಮಹಿಳೆಯ ಸಹಕಾರವೇ ಕಾರಣ. ಈ ಹಿಂದೆ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದರು. ಮುಂದಿನ ದಿನಗಳಲ್ಲಿ ಮತ್ತೋರ್ವ ಮಹಿಳೆ ಪ್ರಧಾನಿಯಾಗಬೇಕು’ ಎಂದು ಅಭಿಪ್ರಾಯ ತಿಳಿಸಿದರು.

ಸ್ತ್ರೀಶಕ್ತಿ ಗುಂಪುಗಳ ಯಶಸ್ವಿ ಕಥೆಗಳ ಅಂತರಾಳ–15 ಸಂಚಿಕೆ ಹಾಗೂ ಮಕ್ಕಳ ಕಲ್ಯಾಣ ಯೋಜನೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ಪ್ರದಾನ
ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಆರು ಸಂಘ ಸಂಸ್ಥೆಗಳೂ ಸೇರಿ ವ್ಯಕ್ತಿ, ಕಲೆ, ಕ್ರೀಡೆ, ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ನೀಡಲಾಯಿತು.

ಬೆಂಗಳೂರಿನ ರೇಖಾ ರಾಜೇಂದ್ರಕುಮಾರ್ ಹಾಗೂ ವಂದನಾ ಶಾಸ್ತ್ರಿ, ಹರಿಣಿ ಸದಾಶಿವ (ದಕ್ಷಿಣ ಕನ್ನಡ), ಸಾವಿತ್ರಿ ಗಣೇಶ್ (ಉಡುಪಿ), ರತ್ನಾ ಹಾಗೂ ಎಸ್.ದೀಪಾಲಿ (ಧಾರವಾಡ), ರಾಜೇಶ್ವರಿ (ಹಾವೇರಿ), ಕೆ.ಪಿ.ಸವಿತಾ (ಬೆಂಗಳೂರು), ದಾಕ್ಷಾಯಿನಿ (ಹಾಸನ), ಕಸ್ತೂರಿ
(ದಕ್ಷಿಣ ಕನ್ನಡ), ಸಂಗೀತಾ ವಿನೋದ್ (ಧಾರವಾಡ), ಬಿ.ಎ.ಅಭಿನೇತ್ರಿ (ಬೆಂಗಳೂರು ಗ್ರಾಮಾಂತರ), ಎ.ಸರಸಮ್ಮ (ಚಿಕ್ಕಬಳ್ಳಾಪುರ), ಗುರುದೇವಿ (ಬೆಳಗಾವಿ), ಸರಸ್ವತಿ ಚಿಮ್ಮಲಗಿ (ವಿಜಯಪುರ), ಎ.ಎಸ್‌.ನಾಗರತ್ನಮ್ಮ (ಬೆಂಗಳೂರು), ವಿದ್ಯಾವತಿ (ಬೀದರ್), ಎಸ್‌.ಸುವರ್ಣಾ (ಬೆಳಗಾವಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.