ಬೆಂಗಳೂರು: ‘ಠಾಣೆ ಎದುರು ಬಂದಿದ್ದ ಕೆಲ ಆಫ್ರಿಕಾ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಆಫ್ರಿಕಾ ಪ್ರಜೆಗಳ ಮೇಲೆ ಲಘು ಲಾಠಿ ಪ್ರಹಾರ ಮಾಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ಹೇಳಿದರು.
ಲಾಠಿ ಪ್ರಹಾರದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆಫ್ರಿಕಾ ಪ್ರಜೆ ಸಾವು ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ’ ಎಂದರು.
‘ಮಾದಕ ವಸ್ತು ಸಿಕ್ಕಿದ್ದರಿಂದ ಆಫ್ರಿಕಾ ಪ್ರಜೆಯನ್ನು ಪ್ರಶ್ನಿಸಲಾಗಿತ್ತು. ಆದರೆ, ಆತ ಯಾವುದೇ ವೈಯಕ್ತಿಕ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ವಿಚಾರಣೆ ನಡೆಸಲು ಠಾಣೆಗೆ ಕರೆತರಲಾಗಿತ್ತು. ಮೂರು ಗಂಟೆಗಳ ನಂತರ ಆತನಿಗೆ ಎದೆನೋವು ಕಾಣಿಸಿಕೊಂಡಿತ್ತು. ಆತನನ್ನು ಚಿರಾಯು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.’
‘ವೈದ್ಯರು ಒಂದೂವರೆ ಗಂಟೆ ಆರೋಪಿಗೆ ಚಿಕಿತ್ಸೆ ನೀಡಿದರು. ಅಷ್ಟಾದರೂ ಆರೋಪಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ. ಆದರೆ, ಆತನ ಹೆಸರು ಗೊತ್ತಾಗಿರಲಿಲ್ಲ. ಆಫ್ರಿಕಾ ಪ್ರಜೆಗಳ ಒಕ್ಕೂಟದ ಪದಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಲಾಯಿತು. ಅವಾಗಲೇ ಆರೋಪಿ ಜಾನ್ ಅಲಿಯಾಸ್ ಜೋಯಿಲ್ ಶಿಂದಾನಿ ಮಲು (27) ಎಂಬುದು ತಿಳಿಯಿತು. ನಂತರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿಯಮ ಹಾಗೂ ಸುಪ್ರೀಂಕೋರ್ಟ್ ಆದೇಶಗಳ ಅನುಸಾರ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು’ ಎಂದೂ ಮುಖರ್ಜಿ ಹೇಳಿದರು.
‘ಸಿಐಡಿ ಅಧಿಕಾರಿಗಳು ಸಹ ಠಾಣೆಗೆ ಬಂದು ತನಿಖೆ ಆರಂಭಿಸಿದ್ದರು. ಇದರ ಮಧ್ಯೆಯೇ ಆಫ್ರಿಕಾ ಪ್ರಜೆಗಳ ಗುಂಪು ಠಾಣೆ ಎದುರು ಬಂದು ಕೂಗಲಾರಂಭಿಸಿತ್ತು. ಕೆಲ ಪ್ರಜೆಗಳು, ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದರು. ಪಿಎಸ್ಐ ಹಾಗೂ ಸಿಬ್ಬಂದಿಗೆ ಗಾಯ ಆಯಿತು. ಅವಾಗಲೇ ಪೊಲೀಸರು ಲಘು ಲಾಠಿ ಬೀಸಿದ್ದಾರೆ. ಕೆಲವರನ್ನು ವಶಕ್ಕೆ ಪಡೆದಿದ್ದಾರೆ’ ಎಂದೂ ಅವರು ತಿಳಿಸಿದರು.
‘ಮೃತ ಪ್ರಜೆಯ ವೀಸಾ ಅವಧಿ 2015ಕ್ಕೆ ಮುಗಿದಿತ್ತು. ಪಾಸ್ಪೋರ್ಟ್ ಅವಧಿ ಸಹ 2013ಕ್ಕೆ ಪೂರ್ಣಗೊಂಡಿರುವುದು ಗೊತ್ತಾಗಿದೆ’ ಎಂದೂ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.