ಬೆಂಗಳೂರು: ‘ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದಾಗಿನಿಂದ 70 ವರ್ಷಗಳಲ್ಲಿ ದೊರೆತ 802 ಅವಕಾಶಗಳ ಪೈಕಿ ಪ್ರಬಲ ಸಮುದಾಯದವರೇ ಪರಿಷತ್ ಸದಸ್ಯತ್ವದ ಸಿಂಹಪಾಲು ಪಡೆದಿದ್ದಾರೆ’ ಎಂದುಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ತಿಳಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ ಬಂದು ಏಳೂವರೆ ದಶಕವಾಗಿದೆ. ಈ ಅವಧಿಯಲ್ಲಿ ಅತಿ ಹಿಂದುಳಿದ ವರ್ಗಗಳ ಸುಮಾರು 197 ಸಮುದಾಯಗಳು ರಾಜಕೀಯ ಅವಕಾಶಗಳಿಂದ ವಂಚಿತವಾಗಿವೆ.ಮುಂಬರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ರಾಜಕೀಯ ಪಕ್ಷಗಳು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.
‘ಪ್ರಸ್ತುತ ವಿಧಾನಪರಿಷತ್ತಿನ 74 ಸದಸ್ಯರಲ್ಲಿ ಒಕ್ಕಲಿಗರು 21, ಲಿಂಗಾಯತರು 20, ಪರಿಶಿಷ್ಟ ಜಾತಿ ಹಾಗೂ ಕುರುಬರು ತಲಾ 5, ಪರಿಶಿಷ್ಟ ಪಂಗಡ, ಮುಸ್ಲಿಂ, ಬೆಸ್ತ ಹಾಗೂ ಈಡಿಗ ಸಮುದಾಯದವರು ತಲಾ 3, ಕೊಡವ, ಬಂಟ ಹಾಗೂ ಬ್ರಾಹ್ಮಣರು ತಲಾ 2, ತಿಗಳ, ವೈಶ್ಯ, ರೆಡ್ಡಿ, ವಿಶ್ವಕರ್ಮ ಮತ್ತು ಜೈನ ಸಮುದಾಯದವರು ತಲಾ ಒಬ್ಬರು ಇದ್ದಾರೆ. ಇವರಲ್ಲಿ ಮುಂಬರುವ ಜೂನ್ ತಿಂಗಳಲ್ಲಿ 7 ಮಂದಿ ನಿವೃತ್ತರಾಗುತ್ತಿದ್ದಾರೆ. ಆ ಸ್ಥಾನಗಳಿಗೆಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.