ಬೆಂಗಳೂರು: ಕರೆ ಮಾಡಲು ನೀಡಿದ್ದ ಮೊಬೈಲ್ ಫೋನ್ ಮರಳಿ ಕೇಳಿದ ಭದ್ರತಾ ಸಿಬ್ಬಂದಿಯೊಬ್ಬರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯನಗರದ ಪಟಾಲಮ್ಮ ದೇವಸ್ಥಾನದ ರಸ್ತೆಯಲ್ಲಿ ಜುಲೈ 3ರಂದು ಈ ಘಟನೆ ನಡೆದಿತ್ತು. ಭದ್ರತಾ ಸಿಬ್ಬಂದಿ ಪರ್ವಿಂದರ್ ಅವರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾಗಿದ್ದ ಆರೋಪಿ ಅಸ್ಗರ್ ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಮಿಥುನ್ ಕುಮಾರ್ ಎಂಬುವರು ಪಟ್ಟಾಲಮ್ಮ ದೇವಸ್ಥಾನದ ರಸ್ತೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಎಂಜಿನಿಯರಿಂಗ್ ಕೆಲಸ ಮಾಡುತ್ತಿದ್ದರು. ಜುಲೈ 3ರಂದು ಇದೇ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಅಸ್ಗರ್, 'ನನ್ನ ಮೊಬೈಲ್ ಹಾಳಾಗಿದೆ, ಒಂದು ಕರೆ ಮಾಡಬೇಕು' ಎಂದು ಮಿಥುನ್ ಕುಮಾರ್ ಬಳಿ ಫೋನ್ ಕೇಳಿದ್ದ. ಈ ವೇಳೆ ಮಿಥುನ್ ಅವರು ಮೊಬೈಲ್ ಫೋನ್ ನೀಡಿದ್ದರು.
ಬಳಿಕ ಮಿಥುನ್ ಕುಮಾರ್ ಫೋನ್ ವಾಪಸ್ ಕೇಳಿದ್ದರು. ಮೊಬೈಲ್ ಹಿಂದಿರುಗಿಸಲು ನಿರಾಕರಿಸಿದ್ದ ಆರೋಪಿ, ತನ್ನ ದ್ವಿಚಕ್ರವಾಹನದ ಮ್ಯಾಟ್ ಅಡಿಯಿಂದ ಮಾರಕಾಸ್ತ್ರ ತೆಗೆದು ಮಿಥುನ್ ಮೇಲೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಗಲಾಟೆ ಬಿಡಿಸಲು ಬಂದ ಭದ್ರತಾ ಸಿಬ್ಬಂದಿ ಪರ್ವಿಂದರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.