ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ನಗರದ ಆನಂದರಾವ್ ವೃತ್ತದಲ್ಲಿ ರೂಪದರ್ಶಿಯೊಬ್ಬರ ಮೇಲೆ ಬಸ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದ ಧ್ರುವ ಅವರು ನೀಡಿದ ದೂರಿನ ಮೇರೆಗೆ ಖಾಸಗಿ ಬಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರೂಪದರ್ಶಿ ಧ್ರುವ ಅವರು ಜುಲೈ 1ರಂದು ಥಾಯ್ಲೆಂಡ್ನಿಂದ ನಗರಕ್ಕೆ ಬಂದು ಹೋಟೆಲ್ವೊಂದಲ್ಲಿ ವಾಸ್ತವ್ಯ ಮಾಡಿದ್ದರು. ಅಂದೇ ರಾತ್ರಿ ಹುಬ್ಬಳ್ಳಿಗೆ ಹೋಗಲು ಬಸ್ ಬುಕ್ ಮಾಡಿದ್ದರು. ರಾತ್ರಿ 11.30ರ ಸುಮಾರಿಗೆ ನಿಲ್ದಾಣಕ್ಕೆ ಹೋಗಿ ಬಸ್ ಪಕ್ಕದಲ್ಲೇ ಸಿಗರೇಟ್ ಸೇದುತ್ತಾ ಸ್ನೇಹಿತರ ಜತೆಗೆ ಮಾತನಾಡುತ್ತಾ ನಿಂತಿದ್ದರು. ಆಗ ಸಿಬ್ಬಂದಿಯೊಬ್ಬ ಬಂದು ಬಸ್ ಹೊರಡುವ ಸಮಯವಾಗಿದೆ ಎಂದು ಹೇಳಿ ಧ್ರುವ ಅವರ ಕೈಗೆ ಹೊಡೆದಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ವಿಕೋಪಕ್ಕೆ ಹೋಗಿ ಬಸ್ನ ಸಿಬ್ಬಂದಿ ಮರದ ಕಟ್ಟಿಗೆಯಿಂದ ಧ್ರುವ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.
ಹಲ್ಲೆಯಿಂದ ಎದೆ, ಮುಖ, ತಲೆಗೆ ಗಾಯವಾಗಿದೆ. ಪಾಸ್ಪೋರ್ಟ್, ನಗದು, ದುಬಾರಿ ಮೌಲ್ಯದ ವಾಚ್ ಇದ್ದ ಬ್ಯಾಗ್ ಕಸಿದುಕೊಳ್ಳಲಾಗಿದೆ ಎಂದು ಹಲ್ಲೆಗೆ ಒಳಗಾದ ಧ್ರುವ ಅವರು ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.