ಬೆಂಗಳೂರು: ಲಾಲ್ಬಾಗ್ ಆವರಣದಲ್ಲಿ ಭಾನುವಾರ ‘ಇಪಿಎಸ್-95’ ಪಿಂಚಣಿದಾರರ ಮಾಸಿಕ ಸಭೆ ನಡೆಯಿತು.
ಬಿಎಂಟಿಸಿ ಮತ್ತು ಕೆಎಸ್ಆರ್ಟಿಎಸ್ ನಿವೃತ್ತ ನೌಕರರ ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ ಮಾತನಾಡಿ, ‘ಇಪಿಎಫ್ಓ ಅಧಿಕಾರಿಗಳು ಸುಪ್ರಿಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸದೇ, ಹತ್ತಾರು ಸುತ್ತೋಲೆಗಳನ್ನು ಹೊರಡಿಸುವ ಮೂಲಕ ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ನಿವೃತ್ತರ ಬದುಕಿಗೆ ಕನಿಷ್ಠ ಪಿಂಚಣಿ ಸೌಲಭ್ಯ ಸಿಗಬೇಕೆಂದು ದೇಶದಾದ್ಯಂತ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಸಂಘರ್ಷ ಸಮಿತಿಯ ಅಧ್ಯಕ್ಷ ಅಶೋಕ್ ರಾಹುತ್ ಅವರೊಂದಿಗೆ ನಮ್ಮ ಸಂಘಟನೆ ಕೈ ಜೋಡಿಸಿದೆ’ ಎಂದರು.
ಸಂಘದ ಉಪಾಧ್ಯಕ್ಷ ಆರ್. ಸುಬ್ಬಣ್ಣ ಮಾತನಾಡಿ, ‘ಇಪಿಎಫ್ಓ ಅಧಿಕಾರಿಗಳು ಎರಡನೇ ಬಾರಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಿದ್ದು, ಅರ್ಜಿ ಸಲ್ಲಿಸದೇ ಇರುವ ನಿವೃತ್ತರೆಲ್ಲರೂ ಅರ್ಜಿ ಸಲ್ಲಿಸಬೇಕು. ಈ ಹಿಂದೆ ತಪ್ಪಾಗಿ ಅರ್ಜಿ ಸಲ್ಲಿಸಿದ್ದರೂ ಅದನ್ನು ಸರಿಪಡಿಸಲು ಅವಕಾಶವಿದೆ. ಪಿಂಚಣಿ ವಿಷಯದಲ್ಲಿ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದು ಹೇಳಿದರು.
ಆರ್ ನಾಗರಾಜು, ರುಕ್ಮಿಶ್, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.