ADVERTISEMENT

ಗೋಕಾಕ, ಕೆ.ಆರ್‌.ಪೇಟೆಗೆ ಅನುದಾನದ ಹೊಳೆ: ಜೆಡಿಎಸ್‌ ನಿಲುವಳಿ ಮಂಡನೆ

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 22:24 IST
Last Updated 16 ಮಾರ್ಚ್ 2020, 22:24 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಬೆಂಗಳೂರು: ಎಸ್ಎಫ್‌ಸಿ ವಿಶೇಷ ಅನುದಾನವನ್ನು (ಮುಖ್ಯಮಂತ್ರಿಗಳ ವಿವೇಚನಾ ನಿಧಿ) ಬಿಜೆಪಿ ಶಾಸಕರ ಕ್ಷೇತ್ರಗಳಿಗಷ್ಟೇ ಮಂಜೂರು ಮಾಡಲಾಗಿದೆ. ಗೋಕಾಕಕ್ಕೆ ₹32.50 ಕೋಟಿ ಹಾಗೂ ಕೆ.ಆರ್‌.ಪೇಟೆಗೆ ₹12 ಕೋಟಿ ನೀಡಲಾಗಿದೆ’ ಎಂದು ಜೆಡಿಎಸ್‌ ಸದಸ್ಯರು ಆರೋಪಿಸಿದರು.

ವಿಧಾನಸಭೆಯಲ್ಲಿ ಸೋಮವಾರ ನಿಯಮ 60ರಡಿ ನಿಲುವಳಿ ಸೂಚನೆ ಮಂಡಿಸಿದ ಜೆಡಿಎಸ್‌ನ ಎಚ್‌.ಡಿ.ರೇವಣ್ಣ, ‘ನಗರಸಭೆ ಹಾಗೂ ಪುರಸಭೆಗಳ ಅನುದಾನವನ್ನು ಬಿಜೆಪಿ ಶಾಸಕರ ಕ್ಷೇತ್ರಗಳಿಗಷ್ಟೇ ಬಿಡುಗಡೆ ಮಾಡಿ ನಗರಾಭಿವೃದ್ಧಿ ಇಲಾಖೆ ಮಾರ್ಚ್‌ 7ರಂದು ಆದೇಶ ಹೊರಡಿಸಿದೆ. ಉಪಚುನಾವಣೆಯಲ್ಲಿ ಗೆದ್ದ ಶಾಸಕರ ಕ್ಷೇತ್ರಗಳಿಗೆ ₹400 ಕೋಟಿಯಿಂದ ₹500 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ದೂರಿದರು.

‘ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ, ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ ಇಲಾಖೆಗಳಿಗೆ ಮಂಜೂರು ಮಾಡಿದ್ದ ಅನುದಾನವನ್ನು ತಡೆ ಹಿಡಿಯಲಾಗಿದೆ. ಆರ್ಥಿಕ ಬಿಕ್ಕಟ್ಟು ಎಂಬ ಕಾರಣ ನೀಡಲಾಗಿದೆ. ಆದರೆ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನದ ಹೊಳೆ ಹರಿಸಲಾಗಿದೆ. ಕಾಂಗ್ರೆಸ್‌–ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವುದಿಲ್ಲ ಎಂದು ಸರ್ಕಾರ ಘೋಷಣೆ ಮಾಡಲಿ. ನಾವು ಮತ್ತೆ ಸರ್ಕಾರವನ್ನು ಪ್ರಶ್ನಿಸುವುದಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.

ADVERTISEMENT

ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.