ಬೆಂಗಳೂರು: ‘ಕೋವಿಡ್ ರೋಗಿಗಳಿಗೆ ನಗರದ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಈಗಾಗಲೇ 340 ಹಾಸಿಗೆಗಳನ್ನು ಮೀಸಲಿಟ್ಟಿದೆ. ಮುಂದಿನ ಎರಡು ವಾರದಲ್ಲಿ ಅದನ್ನು 500 ಹಾಸಿಗೆಗಳಿಗೆ ಹೆಚ್ಚಿಸಲಿದೆ’ ಎಂದು
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಮೂರ್ತಿ ಭರವಸೆ ನೀಡಿದ್ದಾರೆ.
ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಬಳಿಕ ಈ ವಿಷಯ ತಿಳಿಸಿದ ಅಶ್ವತ್ಥನಾರಾಯಣ, ‘ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬದ್ಧತೆ ಮತ್ತು ಸೇವಾ ತತ್ಪರತೆ ಮೆಚ್ಚಲೇಬೇಕು’ ಎಂದರು.
ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಆರ್. ಜಯರಾಮ್ ಮತ್ತು ಕಾಲೇಜು ಸಿಬ್ಬಂದಿ ಜತೆ ಸಭೆ ನಡೆಸಿದ ಉಪಮುಖ್ಯಮಂತ್ರಿ, ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕೋವಿಡ್ ರೋಗಿಗಳ ವಾರ್ಡ್ಗಳನ್ನು ವೀಕ್ಷಿಸಿದರು.
‘ಆಸ್ಪತ್ರೆಯಲ್ಲಿ ಐದು ವೆಂಟಿಲೇಟರ್ಗಳಿದ್ದು, ಅದನ್ನು 25ಕ್ಕೆ ಹೆಚ್ಚಿಸಬೇಕು. 50 ಐಸಿಯು ಬೆಡ್ಗಳನ್ನು ಕನಿಷ್ಠ 100 ರಿಂದ 150 ಮಾಡಬೇಕು’ ಎಂದು ಉಪ ಮುಖ್ಯಮಂತ್ರಿ ಸಲಹೆ ನೀಡಿದರು.
‘ಆಸ್ಪತ್ರೆಯಲ್ಲಿರುವ ಶೇ 10ರಷ್ಟು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ರೆಮೀಡಿಸ್ ಸ್ವೀರ್ ಚುಚ್ಚು ಮದ್ದು ಕೊರತೆ ಇದ್ದು, ಅದನ್ನು ಪೂರೈಸಬೇಕು’ ಎಂದು ಆಸ್ಪತ್ರೆಯ ಆಡಳಿತ ವರ್ಗ ಮಾಡಿದ ಮನವಿಗೆ, ‘ಅಗತ್ಯವಿರುವಷ್ಟು ಚುಚ್ಚುಮದ್ದು ಸೇರಿದಂತೆ ಇತರ ಔಷಧಗಳನ್ನೂ ಒದಗಿಸಲಾಗುವುದು’ ಎಂದರು.
ತಲಾ 10 ವೆಂಟಿಲೇಟರ್, ಡಯಾಲಿಸಿಸ್ ಯಂತ್ರ
‘10 ವೆಂಟಿಲೇಟರ್ ಮತ್ತು 10 ಡಯಾಲಿಸಿಸ್ ಯಂತ್ರಗಳನ್ನು ದಾನಿಗಳಿಂದ ಕೊಡಿಸಲಾಗುವುದು’ ಎಂದು ಎಂ.ಎಸ್. ರಾಮಯ್ಯ ಆಸ್ಪತ್ರೆಯ ಆಡಳಿತ ಮಂಡಳಿಗೆ ಅಶ್ವತ್ಥನಾರಾಯಣ ಭರವಸೆ ನೀಡಿದರು.
ಅಲ್ಲದೆ, ರೋಗಿಗಳಿಗೆ ಆಮ್ಲಜನಕ ಒದಗಿಸುವ 20 ಎಚ್ಎಫ್ಎನ್ಸಿ ಯಂತ್ರಗಳನ್ನು ಕೂಡಾ ಒದಗಿಸಲಾಗುವುದು ಎಂದೂ ಅವರು ಹೇಳಿದರು.
‘20 ವೆಂಟಿಲೇಟರ್ ಗೆ ರಾಮಯ್ಯ ಆಸ್ಪತ್ರೆ ಮನವಿ ಸಲ್ಲಿಸಿದೆ.. ಅವುಗಳನ್ನು ತ್ವರಿತವಾಗಿ ಒದಗಿಸಲಾಗುವುದು. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸಾಗುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಿ ಎನ್ನುವ ಕಾರಣಕ್ಕೆ ಇಷ್ಟೂ ಉಪಕರಣಗಳನ್ನು ನೀಡಲಾಗುತ್ತಿದೆ’: ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.