ಬೆಂಗಳೂರು: ‘ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಯೂ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಕೈಗೊಳ್ಳಲು ಮುಂದಾಗಬೇಕು’ ಎಂದು ತಜ್ಞವೈದ್ಯ ಡಾ. ರವಿ. ಕಣ್ಣನ್ ಆರ್. ಅವರು ಸಲಹೆ ನೀಡಿದರು.
ನಗರದ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆದ 41ನೇ ಘಟಿಕೋತ್ಸದಲ್ಲಿ ಭಾಗವಹಿಸಿ ಮಾತನಾಡಿದರು.
‘ವೈದ್ಯಕೀಯ ವೃತ್ತಿ ಒಂದು ಉನ್ನತವಾದ ವೃತ್ತಿ. ಪ್ರತಿ ವೈದ್ಯರೂ ಸಹಾನುಭೂತಿ ಹೊಂದಿರಬೇಕು. ಇದರಿಂದ ರೋಗಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ’ ಎಂದು ಕಿವಿಮಾತು ಹೇಳಿದರು.
ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ರಾಮಯ್ಯ ಆನ್ವಯಿಕ ವಿಜ್ಞಾನ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಂ.ಆರ್ ಜಯರಾಂ ಉದ್ಘಾಟಿಸಿದರು.
ಘಟಿಕೋತ್ಸವದಲ್ಲಿ 154 ವೈದ್ಯಕೀಯ ಪದವಿ, 136 ಸ್ನಾತಕೋತ್ತರ ಪದವಿ ಹಾಗೂ 42 ಫಿಸಿಯೋಥೆರಪಿ ಪದವಿ ಪಡೆದ ವಿದ್ಯಾರ್ಥಿಗಳು ಸೇರಿದಂತೆ 332 ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪದವಿ ಪ್ರದಾನ ಮಾಡಿದರು. ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಎಂ.ಆರ್. ಜಯರಾಂ ಅವರು ಸನ್ಮಾನಿಸಿದರು.
ಗೋಕುಲ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಎಂ.ಆರ್. ಸಂಪಂಗಿರಾಮ್, ಗೋಕುಲ ಶಿಕ್ಷಣ ಪ್ರತಿಷ್ಠಾನದ (ವೈದ್ಯಕೀಯ) ಮುಖ್ಯ ಕಾರ್ಯನಿರ್ವಾಹಕ ಎಂ.ಆರ್. ಶ್ರೀನಿವಾಸಮೂರ್ತಿ, ಕಾಲೇಜಿನ ಪ್ರಾಚಾರ್ಯೆ ಡಾ. ಶಾಲಿನಿ ಎಸ್. ನೂಯಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.