ADVERTISEMENT

ಸಚಿವರಿಂದ ದ್ವೇಷದ ರಾಜಕಾರಣ: ವಾಗ್ದಾಳಿ

ಎಂಟಿಬಿ ನಾಗರಾಜ್‌ ವಿರುದ್ಧ ಸಂಸದ ಬಚ್ಚೇಗೌಡ ಸೋದರ ಬೈರೇಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 21:41 IST
Last Updated 12 ಜೂನ್ 2021, 21:41 IST
ಹೊಸಕೋಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಪಕ್ಷದ ಮುಖಂಡ ಹಾಗೂ ಬಚ್ಚೇಗೌಡರ ಸಹೋದರ ಬೈರೇಗೌಡ ಮಾತನಾಡಿದರು
ಹೊಸಕೋಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಪಕ್ಷದ ಮುಖಂಡ ಹಾಗೂ ಬಚ್ಚೇಗೌಡರ ಸಹೋದರ ಬೈರೇಗೌಡ ಮಾತನಾಡಿದರು   

ಹೊಸಕೋಟೆ: ’ಅಧಿಕಾರ ಉಳಿಸಿಕೊಳ್ಳಲು ಪಕ್ಷ ಬದಲಿಸುವವರು ಸ್ವಾಭಿಮಾನದಿಂದ ರಾಜಕೀಯ ಮಾಡುತ್ತಿರುವವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಸ್ವಾಭಿಮಾನಿ ಪಕ್ಷದ ಮುಖಂಡ ಹಾಗೂ ಸಂಸದ ಬಚ್ಚೇಗೌಡರ ಸಹೋದರ ಬೈರೇಗೌಡ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಪ್ರಾರಂಭವಾದಾಗಿನಿಂದ ತಾಲ್ಲೂಕಿನ ಮತದಾರರಿಗೆ ಹತ್ತಿರವಿರಬೇಕೆಂಬ ಉದ್ದೇಶದಿಂದ ಬೆಂಗಳೂರಿಗೆ ಹೋಗದೆ ತಾಲ್ಲೂಕಿನ ಬೆಂಡಗಾನಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಶರತ್ ಬಚ್ಚೇಗೌಡ ಅವರ ಬಗ್ಗೆ ಮಾತನಾಡುವ ಸಚಿವರು ಇಷ್ಟು ದಿನ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.

’ಮಾಧ್ಯಮಗಳಲ್ಲಿ ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತವಾದಾಗ ಮನೆಯಿಂದ ಹೊರ ಬಂದ ಸಚಿವರು ತಾಲ್ಲೂಕಿನಲ್ಲಿ ದಿನಸಿ ಕಿಟ್ ಹಂಚುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಶಾಂತನಪುರ ಭೂವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ’1956ರಲ್ಲಿ ಸರ್ಕಾರ ಮಂಜೂರು ಮಾಡಿದ ಭೂಮಿಗೆ ನಮ್ಮ ತಾತ ಹಣ ಪಾವತಿಸಿದ್ದಾರೆ. ಆದರೆ, 14 ವರ್ಷದಿಂದ ಎಂಟಿಬಿ ನಾಗರಾಜ್‌ ಇದನ್ನೇ ಮಾತನಾಡುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿದ್ದಾಗ ಅವರದೇ ಸರ್ಕಾರ ರಾಜ್ಯದಲ್ಲಿ ಇದ್ದರೂ ಇದರ ಬಗ್ಗೆ ತನಿಖೆ ನಡೆಸಿ ಏಕೆ ವಶಪಡಿಸಿಕೊಳ್ಳಲಿಲ್ಲ’ ಎಂದು ಸವಾಲು ಹಾಕಿದರು.

ಸಂಸದ ಬಿ.ಎನ್. ಬಚ್ಚೇಗೌಡ ಹಾಗೂ ಶಾಸಕ ಶರತ್ ಅವರ ಮೇಲೆ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲದ ಕಾರಣ ಅವರು ಪದೇ ಪದೇ ಈ ವಿಷಯ ಕೆದಕುತ್ತಿದ್ದಾರೆ ಎಂದು ದೂರಿದರು.

‌‘ನಾವು ಹುಟ್ಟಿನಿಂದಲೇ ಜಮೀನ್ದಾರರು’

‘ನಾವು ಹುಟ್ಟಿನಿಂದಲೇ ಜಮೀನುದಾರಾಗಿದ್ದು ತಾಲ್ಲೂಕಿನಲ್ಲಿ ನೂರಾರು ಎಕರೆ ಭೂಮಿ ಇದೆ. ಕೆಲ ಜಮೀನು ಇತರರಿಗೆ ದಾನವಾಗಿ ನೀಡಿದ್ದು ಮತ್ತಷ್ಟನ್ನು ರಾಜಕೀಯಕ್ಕಾಗಿ ಕಳೆದುಕೊಂಡಿದ್ದೇವೆಯೇ ಹೊರೆತು ರಾಜಕೀಯಕ್ಕೆ ಬಂದು ತಾಲ್ಲೂಕಿನಲ್ಲಿ ಎಲ್ಲಿಯೂ ಭೂಮಿ ಖರೀದಿಸಿಲಿಲ್ಲ. ತಮ್ಮ ತಂದೆಯವರ ಕಾಲದಿಂದಲೂ ಶುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದು ಅದರಿಂದ ತಾಲ್ಲೂಕಿನ ಜನರ ಪ್ರೀತಿ ಗಳಿಸಿದ್ದೇವೆ‘ ಎಂದು ಬೈರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.