ಬೆಂಗಳೂರು: ‘ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಪೌರಕಾರ್ಮಿಕನ ಕೊಲೆ ಪ್ರಕರಣ ಆಘಾತಕಾರಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು‘ ಎಂದು ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ಒತ್ತಾಯಿಸಿದೆ.
’ಮಾಸ್ಕ್ ಧರಿಸಿ ಎಂದು ಹೇಳಿದ್ದಕ್ಕೆ ಪೌರಕಾರ್ಮಿಕ ಸುನೀಲ್ (24) ಎಂಬುವರ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮಾರಕಾಸ್ತ್ರಗಳಿಂದ ಇರಿದಿದ್ದರಿಂದ ಸುನೀಲ್ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಹಾಗೂ ಅವರ ಅವಲಂಬಿತರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು‘ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಆಗ್ರಹಿಸಿದ್ದಾರೆ.
’ಘಟನೆಯಲ್ಲಿ ಗಾಯಗೊಂಡಿರುವ ಶ್ರೀಕಂಠ ಎಂಬುವರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಮತ್ತು ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು‘ ಎಂದೂ ಅವರು ಒತ್ತಾಯಿಸಿದ್ದಾರೆ.
’ಕೋವಿಡ್ ಶವಗಳ ಸಂಸ್ಕಾರ, ಸೋಂಕಿತರ ಮನೆಗಳಿಗೆ ಔಷಧಿ ಸಿಂಪಡಿಸುವ ಕೆಲಸಕ್ಕೆ ತಾತ್ಕಾಲಿಕ ಟೆಂಡರ್ ಮೂಲಕ ಪ್ರತ್ಯೇಕ ಕಾರ್ಮಿಕರನ್ನು ತಕ್ಷಣವೇ ನೇಮಿಸಬೇಕು. ಪಿಪಿಇ ಕಿಟ್ಗಳನ್ನು ಹಾಗೂ ಗ್ಲೌಸ್, ಮಾಸ್ಕ್, ಫೇಸ್ಶೀಲ್ಡ್, ಸ್ಯಾನಿಟೈಸರ್ ನೀಡದೆ ಈ ಕೆಲಸದಲ್ಲಿ ಪೌರಕಾರ್ಮಿಕರನ್ನು ನಿಯೋಜಿಸಬಾರದು‘ ಎಂದು ಸಂಘದ ಅಧ್ಯಕ್ಷ ಹರೀಶ್ ನಾಯಕ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.