ಬೆಂಗಳೂರು: ಕುಡಿದ ಅಮಲಿನಲ್ಲಿ ಜಗಳ ತೆಗೆದ ಸೆಕ್ಯುರಿಟಿ ಗಾರ್ಡ್ ಒಬ್ಬ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಶಿವಕುಮಾರ್ (28) ಎಂಬುವರನ್ನು ಕೊಲೆ ಮಾಡಿದ್ದಾನೆ.
ವಿವೇಕನಗರ ಹೊರವರ್ತುಲ ರಸ್ತೆಯಲ್ಲಿ ಗುರುವಾರ ರಾತ್ರಿ 8.30ರ ಸುಮಾರಿಗೆ ಈ ಹತ್ಯೆ ನಡೆದಿದೆ. ಆರೋಪಿ ಸೌರಭ್ ರಾಯ್ನನ್ನು ಪೊಲೀಸರು ರಾತ್ರಿಯೇ ಬಂಧಿಸಿದ್ದಾರೆ.
ಬಿಹಾರದ ಶಿವಕುಮಾರ್, ತಿಂಗಳ ಹಿಂದೆ ನಗರಕ್ಕೆ ಬಂದು ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸುವ ಹಾಗೂ ಅವರಿಗೆ ಪಾಳಿಗಳನ್ನು ಹಂಚುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು. ಉತ್ತರ ಪ್ರದೇಶದ ಸೌರಭ್ ಕೂಡ ಆರು ತಿಂಗಳಿನಿಂದ ಅದೇ ಏಜೆನ್ಸಿಯಲ್ಲಿದ್ದ.
‘ಹೊಸದಾಗಿ ಬಂದ ಶಿವಕುಮಾರ್, ರಾತ್ರಿ ಪಾಳಿ ಕೆಲಸಕ್ಕೆ ನನ್ನನ್ನೇ ಹೆಚ್ಚಾಗಿ ನೇಮಕ ಮಾಡುತ್ತಿದ್ದರು. ಇದರಿಂದ ಅವರ ಮೇಲೆ ಕೋಪವಿತ್ತು. ರಾತ್ರಿ ಇಬ್ಬರೂ ಒಟ್ಟಿಗೇ ಮದ್ಯಪಾನ ಮಾಡಿದೆವು. ಈ ವೇಳೆ ಕೆಲಸದ ವಿಚಾರವಾಗಿಯೇ ಮಾತುಕತೆ ನಡೆಯಿತು. ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ತಲೆ ಮೇಲೆ ಕಲ್ಲು ಎತ್ತಿ ಹಾಕಿದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.
‘ಕೃತ್ಯದ ನಂತರ ಸೌರಭ್ ರಾಜ್ಯಕ್ಕೆ ಮರಳುವ ಯತ್ನದಲ್ಲಿದ್ದ. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರ ವರ್ತುಲ ರಸ್ತೆಯಲ್ಲೇ ವಶಕ್ಕೆ ಪಡೆದೆವು’ ಎಂದು ವಿವೇಕನಗರ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.