ADVERTISEMENT

ಚಾಲಕನನ್ನು ಕೊಂದಿದ್ದ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 20:38 IST
Last Updated 25 ಅಕ್ಟೋಬರ್ 2021, 20:38 IST
   

ಬೆಂಗಳೂರು: ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಚಾಲಕ ಚಂದ್ರಶೇಖರ್ ಎಂಬುವರನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ತರಕಾರಿ ವ್ಯಾಪಾರಿ ಭಾಸ್ಕರ್ (46), ಶ್ರೀನಿವಾಸ್ (33), ಗಿರೀಶ್ (30), ಪರಮೇಶ್ (36) ಹಾಗೂ ಮಂಜುನಾಥ್ (36) ಬಂಧಿತರು. ಗೂಡ್ಸ್ ವಾಹನ ಚಾಲಕ ಚಂದ್ರಶೇಖರ್ ಅವರನ್ನು ಆರೋಪಿಗಳು ಅ. 22ರಂದು ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದರು. ಪುರಾವೆಗಳನ್ನು ಸಂಗ್ರಹಿಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಂದ್ರಶೇಖರ್ ಹಾಗೂ ಆರೋಪಿ ಭಾಸ್ಕರ್, 25 ವರ್ಷಗಳ ಸ್ನೇಹಿತರು. ಅವರಿಬ್ಬರ ನಡುವೆ ಹಣಕಾಸು ವ್ಯವಹಾರವಿತ್ತು. ಭಾಸ್ಕರ್‌ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಚಂದ್ರಶೇಖರ್, ಆತನ ಪತ್ನಿ ಜೊತೆ ಸ್ನೇಹವಿಟ್ಟುಕೊಂಡಿದ್ದರು. ಸಲುಗೆಯೂ ಬೆಳೆದಿತ್ತು ಎನ್ನಲಾಗಿದೆ.’

ADVERTISEMENT

‘ತನ್ನ ಪತ್ನಿ ತಂಟೆಗೆ ಬರದಂತೆ ಮಾಡಲು ಮುಂದಾಗಿದ್ದ ಭಾಸ್ಕರ್, ಚಂದ್ರಶೇಖರ್‌ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇತರ ಆರೋಪಿಗಳ ಸಹಾಯ ಪಡೆದು ಮದ್ಯದ ಪಾರ್ಟಿ ಸೋಗಿನಲ್ಲಿ ಚಂದ್ರಶೇಖರ್‌ ಅವರನ್ನು ರಾತ್ರಿ ಕರೆಸಿದ್ದರು. ಎಲ್ಲರೂ ಒಟ್ಟಿಗೆ ಮದ್ಯ ಕುಡಿದಿದ್ದರು. ನಂತರ ಜಗಳ ತೆಗೆದು ಕೊಲೆ ಮಾಡಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.