ADVERTISEMENT

ಸುಪಾರಿ ಹತ್ಯೆ: ಪತ್ನಿ, ಪುತ್ರ ಬಂಧನ

* ಹೃದಯಾಘಾತವೆಂದು ನಾಟಕವಾಡಿದ್ದರು * ಪುತ್ರಿಯರ ಜೊತೆ ಅಸಭ್ಯ ವರ್ತನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 16:47 IST
Last Updated 1 ಮಾರ್ಚ್ 2021, 16:47 IST
ಮೊಹಮ್ಮದ್ ಹಂಜಲ್
ಮೊಹಮ್ಮದ್ ಹಂಜಲ್   

ಬೆಂಗಳೂರು: ಪುತ್ರಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನೆಂಬ ಕಾರಣಕ್ಕೆ ಮೊಹಮ್ಮದ್ ಹಂಜಲ್ (52) ಎಂಬುವರನ್ನು ಹತ್ಯೆ ಮಾಡಿಸಿದ್ದ ಆರೋಪದಡಿ, ಅವರ ಪತ್ನಿ ಹಾಗೂ ಮಗ ಸೇರಿ ಐವರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೆಗ್ಗನಹಳ್ಳಿ ನಿವಾಸಿ ಮೊಹಮ್ಮದ್ ಹಂಜಲ್ ಅವರನ್ನು ಫೆ. 10ರಂದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಹೃದಯಾಘಾತವೆಂದು ಪತ್ನಿ ಹಾಗೂ ಮಗ ನಾಟಕವಾಡಿದ್ದರು. ತನಿಖೆ ಕೈಗೊಂಡಾಗ ಕೊಲೆ ಎಂಬುದು ಸಾಬೀತಾಯಿತು’ ಎಂದು ಪೊಲೀಸರು ಹೇಳಿದರು.

‘ಕೊಲೆ ಆರೋಪದಡಿ ಪತ್ನಿ ಸರ್ವರಿ ಬೇಗಂ (42), ಪುತ್ರ ಶಫಿ ರೆಹಮಾನ್ (20), ಥಣಿಸಂದ್ರದ ನಿವಾಸಿ ಅಫ್ತಾಬ್ (21), ಪೀಣ್ಯದ ಸೈಯದ್ ಅವೆಜ್ ಪಾಷಾ (23) ಹಾಗೂ ಮಹಮ್ಮದ್ ಸೈಫ್ (20) ಬಂಧಿಸಲಾಗಿದೆ. ಅವರಿಂದ ₹ 98 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ADVERTISEMENT

ಇಣುಕಿ ನೋಡುತ್ತಿದ್ದ ಹಂಜಲ್: ‘ಚಪ್ಪಲಿ ತಯಾರಿಕೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಹಂಜಲ್, ಪತ್ನಿ, ಮಗ ಹಾಗೂ ಮೂವರು ಪುತ್ರಿಯರ ಜೊತೆ ವಾಸವಿದ್ದರು. ಪುತ್ರಿಯರು ಬಟ್ಟೆ ಬದಲಾಯಿಸುವಾಗ ಹಾಗೂ ಸ್ನಾನಕ್ಕೆ ಹೋದಾಗ ಮೊಹಮ್ಮದ್ ಹಂಜಲ್ ಇಣುಕಿ ನೋಡುತ್ತಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾಗಿದ್ದ ಪತ್ನಿ ಹಾಗೂ ಮಗ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಅಷ್ಟಾದರೂ ಅವರು ಬುದ್ದಿ ಕಲಿತಿರಲಿಲ್ಲ’ ಎಂದೂ ಪೊಲೀಸರು ತಿಳಿಸಿದರು.

‘ಪತ್ನಿಯ ಶೀಲದ ಬಗ್ಗೆಯೂ ಮೊಹಮ್ಮದ್ ಅನುಮಾನ ವ್ಯಕ್ತಪಡಿಸುತ್ತಿದ್ದರು. ಅದರಿಂದ ಬೇಸತ್ತ ಪತ್ನಿ ಹಾಗೂ ಮಗ ಕೊಲೆಗೆ ಸಂಚು ರೂಪಿಸಿದ್ದರು’ ಎಂದೂ ಹೇಳಿದರು.

₹ 4.50 ಲಕ್ಷಕ್ಕೆ ಒಪ್ಪಂದ: ‘ಪತಿಯನ್ನು ಹತ್ಯೆ ಮಾಡುವುದಕ್ಕಾಗಿ ಸರ್ವರಿ ಬೇಗಂ, ಅಫ್ತಾಬ್ ಹಾಗೂ ಆತನ ಸಹಚರರಿಗೆ ₹ 4.50 ಲಕ್ಷ ನೀಡುವುದಾಗಿ ಮಾತನಾಡಿದ್ದಳು. ಫೆ. 10ರಂದು ರಾತ್ರಿ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿಗೆ ತಿನ್ನಿಸಿದ್ದಳು. ಊಟ ಮಾಡಿ ಮೊಹಮ್ಮದ್ ಮಲಗಿದ್ದರು. ತಡರಾತ್ರಿ ಮನೆಗೆ ಬಂದಿದ್ದ ಇತರೆ ಆರೋಪಿಗಳು, ಉಸಿರುಗಟ್ಟಿಸಿ ಮೊಹಮ್ಮದ್ ಅವರನ್ನು ಕೊಂದು ಪರಾರಿಯಾಗಿದ್ದರು.’

‘ಮರುದಿನ ಪತಿ ಮೃತದೇಹದ ಎದುರು ಗೋಳಾಡಿದ್ದ ಪತ್ನಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ತಿಗರಳರಾಳ್ಯದಲ್ಲಿ ಅಂತ್ಯಕ್ರಿಯೆಯನ್ನೂ ಮಾಡಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.