ADVERTISEMENT

ಅಕ್ಕನಿಗೆ ಹೊಡೆದಿದ್ದಕ್ಕೆ ಭಾವನ ಕೊಲೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 16:55 IST
Last Updated 15 ಫೆಬ್ರುವರಿ 2021, 16:55 IST
ಖಾದರ್ ಖಾನ್
ಖಾದರ್ ಖಾನ್   

ಬೆಂಗಳೂರು: ಅಕ್ಕನ ಮೇಲೆ ಹಲ್ಲೆ ಮಾಡಿದನೆಂಬ ಕಾರಣಕ್ಕೆ ತನ್ನ ಭಾವವನ್ನೇ ಕೊಲೆ ಮಾಡಿರುವ ಘಟನೆ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಭಾಮೈದನನ್ನು ಪೊಲೀಸರು ಬಂಧಿಸಿದ್ದಾರೆ.

‘ಜೈಮಾರುತಿ ನಗರ ನಿವಾಸಿ ಹಾಜಿ ಮಲಂಗ್‌ಖಾನ್ (45) ಕೊಲೆ ಆಗಿದೆ. ಈ ಪ್ರಕರಣದಲ್ಲಿ ಕೂಲಿನಗರದ ನಿವಾಸಿಯಾಗಿರುವ ಆರೋಪಿ ಖಾದರ್‌ ಖಾನ್‌ನನ್ನು (24) ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮುಂಬೈನ ಹಾಜಿ ಮಲಂಗ್‌ಖಾನ್, ಕೆಲಸ ಹುಡುಕಿಕೊಂಡು 15 ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ಆರ್‌ಎಂಸಿ ಯಾರ್ಡ್‌ನಲ್ಲಿರುವ ಲಾರಿ ಗ್ಯಾರೇಜ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಆರೋಪಿ ಖಾದರ್ ಖಾನ್‌ನ ಅಕ್ಕ ಶಾಹೀನಾ ಅವರನ್ನು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.’

ADVERTISEMENT

‘ಮದ್ಯವ್ಯಸನಿಯಾಗಿದ್ದ ಹಾಜಿ ಮಲಂಗ್‌ಖಾನ್, ನಿತ್ಯವೂ ಮದ್ಯ ಕುಡಿದು ಬಂದು ಪತ್ನಿ ಜೊತೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಪತ್ನಿ ಶಾಹೀನಾ, ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ’ ಎಂದೂ ಪೊಲೀಸರು ತಿಳಿಸಿದರು.

‘ಪತಿಯಿಂದ ದೂರವಾಗಿದ್ದ ಶಾಹೀನಾ, ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಭಾನುವಾರ ಶಾಹೀನಾ ಮನೆಗೆ ಬಂದಿದ್ದ ಹಾಜಿ ಮಲಂಗ್‌ಖಾನ್, ಗಲಾಟೆ ಮಾಡಿದ್ದರು. ಮನೆಯಲ್ಲಿದ್ದ ಖಾದರ್ ಖಾನ್, ಭಾವನಿಗೆ ಎಚ್ಚರಿಕೆ ನೀಡಿ ವಾಪಸು ಕಳುಹಿಸಿದ್ದರು. ಮದ್ಯ ಕುಡಿದು ತಡರಾತ್ರಿ ಪುನಃ ಮನೆಗೆ ಬಂದಿದ್ದ ಹಾಜಿ ಮಲಂಗ್‌ಖಾನ್, ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಅಕ್ಕ ಕರೆ ಮಾಡಿ ತಿಳಿಸುತ್ತಿದ್ದಂತೆ ಸ್ನೇಹಿತರ ಜೊತೆ ಮನೆಗೆ ಬಂದಿದ್ದ ಖಾದರ್ ಖಾನ್‌, ಹಾಜಿ ಮಲಂಗ್‌ಖಾನ್ ತಲೆಗೆ ಹಾಲೋಬ್ರಿಕ್ಸ್ ಇಟ್ಟಿಗೆಯಿಂದ ಹೊಡೆದಿದ್ದ. ತೀವ್ರ ರಕ್ತಸ್ರಾವವಾಗಿ ಹಾಜಿ ಮಲಂಗ್‌ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದೂ ಪೊಲೀಸರು ಹೇಳಿದರು.

‘ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿ ಖಾದರ್ ಖಾನ್‌ನನ್ನು ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.