ADVERTISEMENT

ತಾಯಿ ಜೊತೆಗಿನ ಸಲುಗೆ ಪ್ರಶ್ನಿಸಿದ್ದಕ್ಕೆ ಮಗನ ಕೊಲೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 15:42 IST
Last Updated 5 ಅಕ್ಟೋಬರ್ 2021, 15:42 IST

ಬೆಂಗಳೂರು: ಹಲಸೂರು ಠಾಣೆಯ ವ್ಯಾಪ್ತಿಯಲ್ಲಿ ನಂದು (17) ಎಂಬಾತನನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಶಕ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಮರ್ಫಿಟೌನ್‌ ಮನೆಯೊಂದರಲ್ಲಿ ಮಂಗಳವಾರ ಕೊಲೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ಶಕ್ತಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರುತ್ತೇವೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಶಕ್ತಿ, ಮೃತ ನಂದುನ ತಾಯಿ ಜೊತೆ ಸಲುಗೆ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆಗಾಗ ಆಗ ಮನೆಗೂ ಬಂದು ಹೋಗುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಂದು, ಮನೆಗೆ ಬಾರದಂತ ಎಚ್ಚರಿಕೆ ನೀಡಿದ್ದ. ಇದರಿಂದ ಆರೋಪಿ ಶಕ್ತಿ ಸಿಟ್ಟಾಗಿದ್ದ.’

ADVERTISEMENT

‘ಮಂಗಳವಾರವೂ ಮನೆಗೆ ಬಂದಿದ್ದ ಶಕ್ತಿ, ತಾಯಿ ಜೊತೆ ಸಲುಗೆಯಿಂದ ವರ್ತಿಸಿದ್ದ. ಇದನ್ನು ಖಂಡಿಸಿದ್ದ ನಂದು, ಆರೋಪಿಯನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದ.’

‘ಇಬ್ಬರ ನಡುವೆಯೂ ಜಗಳ ಶುರುವಾಗಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಶಕ್ತಿ, ಮನೆಯಲ್ಲಿದ್ದ ಚಾಕುವಿನಿಂದ ನಂದುಗೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ನಂದುನನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟ’ ಎಂದೂ ಪೊಲೀಸರು ತಿಳಿಸಿದರು.

‘ಮಹಿಳೆ ಜೊತೆಗಿನ ಸಲುಗೆಗೆ ನಂದು ಪದೇ ಪದೇ ಅಡ್ಡಿಪಡಿಸಿದ್ದ. ಹೀಗಾಗಿ, ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.