ರಾಜರಾಜೇಶ್ವರಿನಗರ: ‘ನಮ್ಮ ಪೂರ್ವಿಕರು ಮಾಡಿದ ಸಮಾಜ ಸೇವೆ ಮಾದರಿಯಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸೇವೆ ಮಾಡಲು ನನಗೂ ಅವಕಾಶ ನೀಡಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ವಿ.ರಾಜೀವ್ಗೌಡ ಮನವಿ ಮಾಡಿದರು.
ಎಚ್.ಗೊಲ್ಲಹಳ್ಳಿಯ ದೊಡ್ಡಬೆಲೆ, ಚಿಕ್ಕೇಗೌಡನಪಾಳ್ಯದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಪೂರ್ವದಲ್ಲಿ ಕೆರೆಕುಂಟೆ, ಗೋಕುಂಟೆ ನಿರ್ಮಾಣ, ಸ್ವಾತಂತ್ರ್ಯ ಚಳುವಳಿ ಭಾಗವಹಿಸಿದ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಿಮ್ಮ ಮನೆಯ ಮಗ ನಾನು. ನನಗೆ ಒಮ್ಮೆ ಅವಕಾಶ ನೀಡಿದರೆ ಕೆರೆಗಳಿಗೆ ನೀರು ತುಂಬಿಸುತ್ತೇನೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇನೆ’ ಎಂದು ಕೋರಿದರು.
ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಜೂನ್ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಮಂಚನೆಬೆಲೆ ಜಲಾಶಯದಿಂದ 120ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಚಾಲನೆಗೆ ಅವಕಾಶ ಕೊಟ್ಟಿರುವ ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಬೆಂಬಲವಿದೆ. ನನಗೆ ಅಧಿಕಾರ, ಪಕ್ಷ ಮುಖ್ಯವಲ್ಲ. ಕ್ಷೇತ್ರದ ಜನರ ಸೇವೆಯೆ ಮುಖ್ಯ’ ಎಂದು ಹೇಳಿದರು.
‘ಈ ಕ್ಷೇತ್ರದ ಶಾಸಕ ನಾನಿರುವಾಗ. ಸೌಜನ್ಯಕ್ಕಾದರೂ ಮಾತನಾಡಿಸದ ಶೋಭಾ ಕರಂದ್ಲಾಜೆ ಅವರಿಗೆ ಯಾವ ರೀತಿ ಮತಕೇಳಲಿ’ ಎಂದರು.
ಕಾಂಗ್ರೆಸ್ ಮುಖಂಡ ಬಿ.ಆರ್.ಶಿವಮಾದಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಎಂ.ಸದಾನಂದ, ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಅಮೃತ್ ಗೌಡ, ಎಚ್. ಈರಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.