ADVERTISEMENT

ಮೈಸೂರು ಸ್ಫೋಟ ಪ್ರಕರಣ: ಅ. 11ಕ್ಕೆ ಶಿಕ್ಷೆ ಪ್ರಕಟ

* ಮೈಸೂರಿನ ಕೋರ್ಟ್ ಆವರಣದಲ್ಲಿ ಸಂಭವಿಸಿದ್ದ ಸ್ಟೋಟ * ಅ. 11ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 20:57 IST
Last Updated 8 ಅಕ್ಟೋಬರ್ 2021, 20:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಮೈಸೂರು ಕೋರ್ಟ್‌ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ, ‘ಅಲ್‌ ಖೈದಾ-ಬೇಸ್‌ ಮೂವ್‌ಮೆಂಟ್‌’ ಉಗ್ರ ಸಂಘಟನೆಯ ಮೂವರ ವಿರುದ್ಧ ದಾಖಲಿಸಿದ್ದ ಆರೋಪಗಳು ಸಾಬೀತಾಗಿವೆ. ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಅ. 11ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ಮೈಸೂರಿನ ಲಕ್ಷ್ಮೀಪುರಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ನಡೆಸಿತ್ತು.

'ಬಾಂಬ್‌ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ನೈನಾರ್ ಅಬ್ಬಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಬಾಸ್, ಎಂ. ಸಮಸೂನ್ ಕರೀಂ ರಾಜ್ ಅಲಿಯಾಸ್ ಅಬ್ದುಲ್ ಕರೀಂ ಹಾಗೂ ದಾವೂದ್ ಸುಲೈಮಾನ್ ಭಾಗಿಯಾಗಿದ್ದರು. ಈ ಮೂವರು ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಪ್ರಕರಣವೇನು?: 2016ರ ಆಗಸ್ಟ್ 1ರಂದು ಮೈಸೂರು ಕೋರ್ಟ್‌ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಸೆ. 20ರಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ, ಮೂವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

‘ಅಲ್‌ ಖೈದಾ’ ಮಾದರಿಯಲ್ಲಿ ‘ಬೇಸ್‌ ಮೂವ್‌ಮೆಂಟ್‌’ ಎಂಬ ಉಗ್ರ ಸಂಘಟನೆಯನ್ನು 2015ರಲ್ಲಿ ರಚಿಸಿಕೊಂಡಿದ್ದ ಆರೋಪಿಗಳು, ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದರು. ಒಸಾಮಾ ಬಿನ್‌ ಲಾಡೆನ್ ತತ್ವಗಳನ್ನು ಪಾಲಿಸುತ್ತಿದ್ದರು. ತಮ್ಮದೇ ಸಮುದಾಯದ ಯುವಕರನ್ನು ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದರು. ಸರ್ಕಾರದ ಕಚೇರಿ ಹಾಗೂ ಕೋರ್ಟ್‌ಗಳಲ್ಲಿ ಬಾಂಬ್‌ಗಳನ್ನು ಸ್ಫೋಟಿಸಿ ಜನರಲ್ಲಿ ಭಯವನ್ನುಂಟು ಮಾಡುವುದು ಅವರ ಉದ್ದೇಶವಾಗಿತ್ತು’ ಎಂಬುದನ್ನು ಆರೋಪ ಪಟ್ಟಿಯಲ್ಲಿ ಎನ್‌ಐಎ ತಿಳಿಸಿತ್ತು.

‘ಆಂಧ್ರಪ್ರದೇಶದ ನೆಲ್ಲೂರಿನ ಕೋರ್ಟ್‌ ಆವರಣದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈ ಉಗ್ರರು ಭಾಗಿಯಾಗಿದ್ದರು. ಮೈಸೂರು ಕೋರ್ಟ್‌ ಆವರಣದ ಶೌಚಾಲಯದಲ್ಲೂ ಬಾಂಬ್ ಇರಿಸಿ ಸ್ಫೋಟಿಸಿದ್ದರು’ ಎಂಬುದಾಗಿಯೂ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.