ಬೆಂಗಳೂರು: ನಗರದಲ್ಲಿ ಬಿತ್ತಿಪತ್ರಗಳನ್ನು ಅಂಟಿಸಲುಮರಗಳಿಗೆ ಮೊಳೆ ಹೊಡೆಯಲಾಗುತ್ತಿದೆ. ಕೆಲವೆಡೆ ಸ್ಟ್ಯಾಪ್ಲರ್ ಪಿನ್ ಚುಚ್ಚಿ ಮಾಹಿತಿಪತ್ರ ಅಂಟಿಸಲಾಗುತ್ತಿದೆ. ಇನ್ನು ಕೆಲವೆಡೆ ಕೇಬಲ್ಗಳನ್ನು ಮರಗಳಿಗೆ ಸುತ್ತಲಾಗಿದೆ. ಈ ರೀತಿ ಮರಗಳಿಗೆ ಹಾನಿ ಉಂಟು ಮಾಡುವುದನ್ನು ತಡೆಯಲು ಬಿ–ಪ್ಯಾಕ್ ಸಂಸ್ಥೆ 'ಮೊಳೆ ಮುಕ್ತ ಮರ– ಬೆಂಗಳೂರು ಅಭಿಯಾನ'ವನ್ನು ಹಮ್ಮಿಕೊಂಡಿದೆ.
ಈ ಅಭಿಯಾನಕ್ಕೆ ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಚಿತ್ರಕಲಾ ಪರಿಷತ್ ಸಮೀಪದ ಬಸ್ ನಿಲ್ದಾಣ ಬಳಿ ಬುಧವಾರ ಚಾಲನೆ ನೀಡಿದರು.
‘ಮರಗಳಿಗೂ ಜೀವ ಇದೆ. ಮೊಳೆ ಹೊಡೆದರೆ, ಕೇಬಲ್, ತಂತಿಗಳನ್ನು ಸುತ್ತಿದರೆ ಮರಗಳಿಗೂ ಗಾಯವಾಗುತ್ತದೆ. ಮನುಷ್ಯರರಂತೆಯೇ ಅವುಗಳಿಗೂ ನೋವಾಗುತ್ತದೆ. ಅವುಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ’ ಎಂದರು.
‘ಮರಗಳಿಗೆ ಸೂಚನಾಪತ್ರ ಅಂಟಿಸುವುದು, ಮೊಳೆ ಹೊಡೆಯುವುದನ್ನು ನಿಷೇಧಿಸಿದ್ದರೂ ಈ ಕೃತ್ಯ ಮುಂದುವರಿದಿದೆ. ಇಂತಹ ಕೃತ್ಯ ನಡೆಸುವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಮರಗಳಿಗೆ ಹಾನಿ ಮಾಡುವವವರನ್ನು ಶಿಕ್ಷಿಸಲು ಇನ್ನಷ್ಟು ಕಠಿಣ ಕಾನೂನು ರೂಪಿಸಬೇಕಾಗಿದೆ’ ಎಂದೂ ಅವರು ಅಭಿಪ್ರಾಯಪಟ್ಟರು.
‘ನಗರದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಾಗಿ ಕೆಲವೊಂದು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಕಾಮಗಾರಿಗಾಗಿ ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸಲು ಬಿಬಿಎಂಪಿ ಕ್ರಮ ವಹಿಸಲಿದೆ.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯು (ಬಿಐಎಎಲ್) ಮರಗಳನ್ನು ಸ್ಥಳಾಂತರ ಮಾಡಿ ನಾಟಿ ಮಾಡುವ ದೊಡ್ಡ ಯಂತ್ರಗಳನ್ನು ಹೊಂದಿದೆ. ಮರಗಳನ್ನು ಸ್ಥಳಾಂತರಿಸಲು ನೆರವಾಗುವುದಾಗಿ ಬಿಐಎಎಲ್ ತಿಳಿಸಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.