
ಹೊಸಕೋಟೆ: ಬೆಂಗಳೂರಿನ ಕೃಷ್ಣರಾಜಪುರದಿಂದ ಹೊಸಕೋಟೆವರೆಗೂ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ ವಿಸ್ತರಣೆಗೆ ಯೋಜನೆಯ ನೀಲನಕ್ಷೆ ಬಹುತೇಕ ಪೂರ್ಣಗೊಂಡಿದೆ. ಬಿಎಂಅರ್ಸಿಎಲ್ ಸಿದ್ಧತೆ ಆರಂಭಿಸಿದೆ.
ಹೊಸಕೋಟೆಗೆ ಒಟ್ಟು 16.3 ಕಿ.ಮೀ. ಉದ್ದದ ಮೆಟ್ರೊ ಮಾರ್ಗದಲ್ಲಿ 11 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೆಟ್ರೊ ಸಂಚರಿಸಲಿದೆ.
ಕೋಲಾರ ಜಿಲ್ಲೆ, ಚಿಂತಾಮಣಿ ಹಾಗೂ ಮಾಲೂರು ಜನತೆ ಬೆಂಗಳೂರಿಗೆ ತೆರಳಲು ಹೊಸಕೋಟೆ ರಸ್ತೆಯನ್ನು ಅವಲಂಬಿಸಿದ್ದಾರೆ. ಹೊಸಕೋಟೆವರೆಗೂ ಮೆಟ್ರೊ ಮಾರ್ಗ ಶುರುವಾದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ಹೊಸಕೋಟೆಗೆ ಮೆಟ್ರೊ ಕಾರಿಡಾರ್ ಬೇಕು ಎಂಬ ಜನರ ಬಹಳ ದಿನಗಳ ಕನಸು ಶೀಘ ನನಸಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು. ಶೀಘ್ರದಲ್ಲಿಯೇ ಯೋಜನೆಯ ಸಮಗ್ರ ಮಾಹಿತಿ ಒದಗಿಸುವುದಾಗಿ ಅವರು ಹೇಳಿದರು.
ಸದನದಲ್ಲಿ ಒಪ್ಪಿಗೆ:
ಮೆಟ್ರೊ ಯೋಜನೆಯ ಬಗ್ಗೆ ಸದನಲ್ಲಿಯೂ ಧ್ವನಿ ಎತ್ತಲಾಗಿತ್ತು. ಕೆ.ಆರ್.ಪುರಂನಿಂದ ಹೊಸಕೋಟೆವರೆಗಿನ ಮೆಟ್ರೊ ಗುಲಾಬಿ ಮಾರ್ಗಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ. ಸದ್ಯ ಮಾರ್ಗದ ಸಿದ್ಧತೆ ನೀಲನಕ್ಷೆ ರೂಪಿಸಲಾಗಿದ್ದು, ಮಾರ್ಗದ ವಿಸ್ತರಣೆ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದರು.
ಎಲ್ಲೆಲ್ಲಿ ನಿಲ್ದಾಣ?
ಕೆ.ಅರ್.ಪುರಂ ಐಟಿಐ ಭವನ ಟಿಸಿಪಾಳ್ಯ ಭಟ್ಟರಹಳ್ಳಿ ಜಂಕ್ಷನ್ ಮೇಡಹಳ್ಳಿ ಜಂಕ್ಷನ್ ಆವಲಹಳ್ಳಿ ಬೂದಿಗೆರೆ ಕ್ರಾಸ್ ಕಾಟಂನಲ್ಲೂರು ಗೇಟ್ ಹೊಸಕೋಟೆ ಟೋಲ್ ಪ್ಲಾಜಾ ಕೆಇಬಿ ಸರ್ಕಲ್ ಹೊಸಕೋಟೆ ಸರ್ಕಾರಿ ಅಸ್ಪತ್ರೆ ಸೇರಿದಂತೆ 11 ನಿಲ್ದಾಣ ಗುರುತಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.