ADVERTISEMENT

ಇಂದು ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ: ಏನೇನು ವಿಶೇಷ?

ಕಿತ್ತಳೆ ಮಾರ್ಗಕ್ಕೆ ಶಂಕುಸ್ಥಾಪನೆ * ವಂದೇ ಭಾರತ್‌ಗೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 1:44 IST
Last Updated 10 ಆಗಸ್ಟ್ 2025, 1:44 IST
Manjunath C. Bhadrashetti
   Manjunath C. Bhadrashetti

ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐ.ಟಿ) ಹಬ್‌ ಆಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಲಿದ್ದಾರೆ. ಹೊಸಮಾರ್ಗದಿಂದಾಗಿ, ನಗರದಲ್ಲಿ ಇಲ್ಲಿಯವರೆಗೆ 76.95 ಕಿ.ಮೀ. ಇದ್ದ ಮೆಟ್ರೊ ಜಾಲ 96 ಕಿ.ಮೀ.ಗೆ ವಿಸ್ತರಣೆಗೊಳ್ಳಲಿದೆ.

ಬೆಳಿಗ್ಗೆ 10ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ನರೇಂದ್ರ ಮೋದಿ ಅವರು 11ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಳಗಾವಿ–ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಇದೇ ಸಮಯದಲ್ಲಿ ಪಂಜಾಬಿನ ಅಮೃತಸರದಿಂದ ಜಮ್ಮುಕಾಶ್ಮೀರದ ಕಟ್ರಾ ಮತ್ತು ಮಹಾರಾಷ್ಟ್ರದ ಪುಣೆ–ಅಜ್ನಿ (ನಾಗ್ಪುರ) ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೂ ಇಲ್ಲಿಂದಲೇ ವರ್ಚುವಲ್‌ ಆಗಿ ಚಾಲನೆ ನೀಡಲಿದ್ದಾರೆ.

ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಆರ್‌.ವಿ. ರಸ್ತೆ ಮೆಟ್ರೊ ನಿಲ್ದಾಣಕ್ಕೆ ತೆರಳಲಿರುವ ಪ್ರಧಾನಿ, ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೊದಲ್ಲಿ ಪ್ರಯಾಣಿಸಲಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ಮಧ್ಯಾಹ್ನ 1ಕ್ಕೆ ಸಮಾರಂಭ ನಡೆಯಲಿದೆ. 

ADVERTISEMENT

₹15,610 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೆಂಪಾಪುರ–ಜೆ.ಪಿ.ನಗರ 4ನೇ ಹಂತ ಹಾಗೂ ಹೊಸಹಳ್ಳಿ–ಕಡಬಗೆರೆ ನಡುವಿನ ‘ನಮ್ಮ ಮೆಟ್ರೊ’ 3ನೇ ಹಂತಕ್ಕೆ (ಕಿತ್ತಳೆ ಮಾರ್ಗ) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ₹7,160 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆರ್‌.ವಿ. ರಸ್ತೆ– ಬೊಮ್ಮಸಂದ್ರ ‘ನಮ್ಮ ಮೆಟ್ರೊ’ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 1.30ರಿಂದ 2ರವರೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾಗವಹಿಸುವ ಅತಿಥಿಗಳು

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ ಲಾಲ್‌ ಖಟ್ಟರ್‌, ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕಾರ್ಮಿಕ ಮತ್ತು ಸಣ್ಣ ಉದ್ಯಮ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಬಿ.ವೈ. ವಿಜಯೇಂದ್ರ.

ಹಳದಿ ಮಾರ್ಗದ ನಿಲ್ದಾಣಗಳು

ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೊಸಿಸ್‌ ಫೌಂಡೇಷನ್‌ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್‌ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್‌, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಬಿಟಿಎಂ ಲೇಔಟ್‌, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್‌.ವಿ. ರಸ್ತೆ.

ಬೆಳಗಾವಿ–ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ಚಾಲಕ ರಹಿತ ಮೆಟ್ರೊ

ಚಾಲಕ ಸಹಿತ ಸಂಚಾರ ಹಳದಿ ಮಾರ್ಗದಲ್ಲಿ ಸಂಚರಿಸಲು ಚಾಲಕ ರಹಿತ ಎಂಜಿನ್‌ ಹೊಂದಿರುವ ಪ್ರೊಟೊಟೈಪ್‌ (ಮೂಲ ಮಾದರಿ) ಮೂರು ರೈಲುಗಳು ಈಗಾಗಲೇ ಬಂದಿವೆ. ಆದರೆ ಪ್ರಧಾನಿ ಚಾಲನೆ ನೀಡಿದ ಬಳಿಕ ಚಾಲಕ ಸಹಿತ ಸಂಚಾರ ನಡೆಸಲಿವೆ. ಪ್ರತಿ 25 ನಿಮಿಷಕ್ಕೊಂದು ಟ್ರಿಪ್‌ ಇರಲಿದೆ. ‘ನಮ್ಮ ಮೆಟ್ರೊ’ ಇತರ ಮಾರ್ಗಗಳಲ್ಲಿ ‘ಡಿಸ್ಟೆನ್ಸ್‌ ಟು ಗೊ’ (ಡಿಟಿಜಿ) ವ್ಯವಸ್ಥೆಯ ಲೋಕೊ ಪೈಲಟ್‌ ಮೆಟ್ರೊಗಳೇ ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಮಾತ್ರ ಚಾಲಕ ರಹಿತ ರೈಲು ಸಂಚರಿಸಲು ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಅಳವಡಿಸಲಾಗಿದೆ. ಆರಂಭದಲ್ಲಿ ಲೋಕೊ ಪೈಲಟ್‌ಗಳನ್ನು (ಚಾಲಕರನ್ನು) ನಿಯೋಜಿಸಲಾಗುವುದು. ಯಾವುದೇ ಸಮಸ್ಯೆ ಉಂಟಾಗದಿರುವುದು ಖಾತ್ರಿಯಾದ ಮೇಲೆ ಲೋಕೊ ಪೈಲಟ್‌ಗಳಿಲ್ಲದೇ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ರಾಜ್ಯದಲ್ಲಿ 11ನೇ ವಂದೇ ಭಾರತ್‌ ರೈಲು

ರಾಜ್ಯದಲ್ಲಿ ಇಲ್ಲಿವರೆಗೆ 10 ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿದ್ದು ಪ್ರಧಾನಿಯವರು ಭಾನುವಾರ ಚಾಲನೆ ನೀಡಲಿರುವ ಬೆಳಗಾವಿ–ಬೆಂಗಳೂರು ವಂದೇ ಭಾರತ್‌ ರೈಲು 11ನೆಯದ್ದಾಗಿದೆ. 2022ರಲ್ಲಿ ಮೊದಲ ವಂದೇ ಭಾರತ್‌ ರಾಜ್ಯದಲ್ಲಿ ಸಂಚರಿಸಿತ್ತು. ಎರಡು ರೈಲುಗಳು ರಾಜ್ಯದ ಒಳಗೇ ಸಂಚರಿಸುತ್ತಿದ್ದರೆ ಉಳಿದ 9 ರೈಲುಗಳು ರಾಜ್ಯದಿಂದ ಪಕ್ಕದ ರಾಜ್ಯಗಳಿಗೆ ಸಂಚರಿಸುತ್ತಿವೆ.  ಬೆಳಗಾವಿ–ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಧಾರವಾಡ ಹುಬ್ಬಳ್ಳಿ ಹಾವೇರಿ ದಾವಣಗೆರೆ ತುಮಕೂರು ಮತ್ತು ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಕನ್ನಡದಲ್ಲಿ ಮೋದಿ ಮಾಹಿತಿ

ವಂದೇ ಭಾರತ್‌ ಮೆಟ್ರೊ ರೈಲುಗಳಿಗೆ ಚಾಲನೆ ನೀಡಲು ಬೆಂಗಳೂರಿಗೆ ಆಗಮಿಸುತ್ತಿರುವ ಬಗ್ಗೆ ನರೇಂದ್ರ ಮೋದಿ ಅವರು ‘ಎಕ್ಸ್‌’ ಖಾತೆಯಲ್ಲಿ ಕನ್ನಡದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ‘ಆಗಸ್ಟ್ 10 ರಂದು ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಕೆಎಸ್‌ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯವನ್ನು ಹೆಚ್ಚಿಸಲು ಬೆಂಗಳೂರು ಮೆಟ್ರೊ ಹಳದಿ ಮಾರ್ಗವನ್ನು ಉದ್ಘಾಟಿಸಲಾಗುವುದು. ಮೆಟ್ರೊ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.