ಬೆಂಗಳೂರು: ಯಶವಂತಪುರದ ತಾಜ್ ಹೋಟೆಲ್ನಲ್ಲಿ ಜುಲೈ 14 ಮತ್ತು 15ರಂದು ವಿವಿಧ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯೋಜಿಸುತ್ತಿರುವ ಈ ಸಮ್ಮೇಳನದಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಶೋಭಾ ಕರಂದ್ಲಾಜೆ, ಕೈಲಾಶ್ ಚೌಧರಿ ಭಾಗವಹಿಸುವರು.
ಒಂದು ರಾಷ್ಟ್ರ ಒಂದು ಮಾರುಕಟ್ಟೆ ಪರಿಸರ ವ್ಯವಸ್ಥೆಯ ರಚನೆ, ಡಿಜಿಟಲ್ ಕೃಷಿ, ನೈಸರ್ಗಿಕ ಕೃಷಿ ಸೇರಿದಂತೆ 9 ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ. ರೈತರು ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು, ವ್ಯಾಪಾರ ಮತ್ತು ಮಾರುಕಟ್ಟೆ ಉತ್ತೇಜಿಸಲು ಇ–ನ್ಯಾಮ್ ಪ್ಲಾಟ್ಫಾರಂ ವೇದಿಕೆಯನ್ನು ಸಮ್ಮೇಳನದಲ್ಲೇ ಆರಂಭಿಸಲಾಗುತ್ತಿದೆ. ಬಹು ಸಂಖ್ಯೆಯ ಮಾರುಕಟ್ಟೆಗಳು, ಖರೀದಿದಾರರು, ಸೇವಾ ಪೂರೈಕೆದಾರರು ಡಿಜಿಟಲ್ ಮೂಲಕ ರೈತರ ಭಾಗವಹಿಸುವಿಕೆ ಹೆಚ್ಚಿಸಲು ಅವಕಾಶ ನೀಡಲಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ದೇಶದ ವಿವಿಧ ರಾಜ್ಯಗಳು ಕೃಷಿ ವಲಯದಲ್ಲಿ ಅಳವಡಿಸಿಕೊಂಡಿರುವ ಉತ್ತಮ ಅಂಶಗಳ ಕುರಿತು ಪ್ರತ್ಯೇಕ ಚರ್ಚೆಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.