ADVERTISEMENT

ಪ್ರತಿಮೆ ನಿರ್ಮಿಸದಿರುವುದೇ ಮಹಾತ್ಮರಿಗೆ ಸಲ್ಲಿಸುವ ನಿಜವಾದ ಗೌರವ: ಜಯಂತ ಕಾಯ್ಕಿಣಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 14:58 IST
Last Updated 20 ಆಗಸ್ಟ್ 2023, 14:58 IST
ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ ಅವರು ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಲೇಖಕರಾದ ಎನ್.ಸಿ.ಮಹೇಶ್, ಅಮಿತಾ ಭಾಗವತ್, ‌ಎಚ್. ಡುಂಡಿರಾಜ್, ಜೋಗಿ ಮತ್ತು ಕೃಷ್ಣಮೂರ್ತಿ ಕರ್ಕಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ ಅವರು ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಲೇಖಕರಾದ ಎನ್.ಸಿ.ಮಹೇಶ್, ಅಮಿತಾ ಭಾಗವತ್, ‌ಎಚ್. ಡುಂಡಿರಾಜ್, ಜೋಗಿ ಮತ್ತು ಕೃಷ್ಣಮೂರ್ತಿ ಕರ್ಕಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಹಾತ್ಮರ, ಸಾಧಕರ ಪ್ರತಿಮೆ ನಿರ್ಮಿಸುವ ನಾವು, ಮನೆಗೆ ಹೋಗಿ ಬೆಚ್ಚಗೆ ಮಲಗುತ್ತೇವೆ. ಪ್ರತಿಮೆ ಮಾತ್ರ ಬಿಸಿಲು–ಮಳೆಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಪ್ರತಿಮೆ ನಿರ್ಮಿಸದಿರುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. 

ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಚ್. ಡುಂಡಿರಾಜ್ ಅವರ ‘ಹನಿಟ್ರ್ಯಾಪ್’, ಅಮಿತಾ ಭಾಗವತ್ ಅವರ ‘ನೀಲಿ ನಕ್ಷೆ’, ನಾ. ಮೊಗಸಾಲೆ ಅವರ ‘ನೀರು’, ಎನ್.ಸಿ. ಮಹೇಶ್ ಅವರ ‘ಸಾಕುತಂದೆ ರೂಮಿ’ ಪುಸ್ತಕವನ್ನು ಬಿಡುಗಡೆ ಮಾಡಿ, ಮಾತನಾಡಿದರು. 

‘ಯಾರ ಪ್ರತಿಮೆ ನಿರ್ಮಿಸಿದರೂ ಈಗ ವಾದ ವಿವಾದದ ಬೇಗೆ. ಎಲ್ಲರ ಪ್ರತಿಮೆಯನ್ನೂ ನಿರಾಯಾಸದಿಂದ ಸ್ವಾಗತಿಸುವುದು ಕಾಗೆ’ ಎಂಬ ಡುಂಡಿರಾಜ್ ಅವರ ಹನಿಗವನ ಓದಿದ ಜಯಂತ ಕಾಯ್ಕಿಣಿ, ‘ಕೆಲವು ಪ್ರತಿಮೆಗಳಿಗೆ ಕನ್ನಡಕವನ್ನೂ ಹಾಕಲಾಗುತ್ತದೆ. ಹಿಂದೆಲ್ಲ ಪ್ರತಿಮೆಯ ಕನ್ನಡಕದ ಗ್ಲಾಸ್‌ಗಳು ಕಳವಾಗುತ್ತಿದ್ದವು. ಮುಂಬೈನಲ್ಲಿ ನಿರ್ಮಿಸಿದ್ದ ನಾನಾವಟಿ ಅವರ ಪ್ರತಿಮೆಯ ಕನ್ನಡಕದ ಗ್ಲಾಸ್ ಹಲವು ಬಾರಿ ಕಳವಾಗಿತ್ತು’ ಎಂದು ಸ್ಮರಿಸಿಕೊಂಡರು. 

ADVERTISEMENT

ಲೇಖಕ ಮತ್ತು ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ), ‘11ನೇ ಶತಮಾನದಿಂದ ಇಂದಿನವರೆಗೂ ಹನಿಗವನಗಳು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿವೆ. ರೂಮಿಯ ಹನಿಗವನ ನಗಿಸಿದರೆ, ಡುಂಡಿರಾಜ್ ಅವರ ಹನಿಗವನ ಅಳಿಸುತ್ತದೆ. ಹೀಗೆ ಅದರ ವಿಸ್ತಾರ ಬಹುವಾಗಿದೆ’ ಎಂದು ತಿಳಿಸಿದರು.

ಕಥೆಗಾರ ಕೃಷ್ಣಮೂರ್ತಿ ಕರ್ಕಿ, ‘ಅನುಭಗಳ ಗುಚ್ಛವಾಗಿ ಕತೆಗಳು ಮೂಡಿಬರುತ್ತದೆ. ಕಾದಂಬರಿ ಜೀವನಕ್ಕೆ ಹತ್ತಿರವಾದ ವಿಷಯಗಳನ್ನು ಒಳಗೊಂಡಿದ್ದರೆ, ಅದು ಓದುಗನಿಗೂ ಹತ್ತಿರವಾಗುತ್ತದೆ’ ಎಂದರು.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.