ಬೆಂಗಳೂರು: ಹಗಲು ಮತ್ತು ರಾತ್ರಿ ವೇಳೆಯಲ್ಲಿ ಯಾರೂ ಇಲ್ಲದಿರುವ ಮನೆಗಳನ್ನು ಗುರುತಿಸಿ ಬೀಗ ಮುರಿದು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು, ಆರೋಪಿಯಿಂದ ₹ 16 ಲಕ್ಷ ಮೌಲ್ಯದ 466 ಗ್ರಾಂ ತೂಕದ ಚಿನ್ನದ ಒಡವೆ ವಶಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಉದಯ್ ಅಲಿಯಾಸ್ ನೀರು ಮಜ್ಜಿಗೆ (34) ಬಂಧಿತ ಆರೋಪಿ. ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಈತ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಸಹಚರ ಸಂತೋಷ್ ಅಲಿಯಾಸ್ ಎಮ್ಮೆ ಎಂಬಾತನ ಜೊತೆ ಸೇರಿ ಕಳವು ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.
ಆರೋಪಿಯ ಬಂಧನದಿಂದ ಜಾಲಹಳ್ಳಿ, ಗಂಗಮ್ಮ ಗುಡಿ, ಸೋಲದೇವನಹಳ್ಳಿ, ಕೋಲಾರ ಜಿಲ್ಲೆಯ ಮಾಲೂರು, ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣಾ ವ್ಯಾಪ್ತಿಗಳಲ್ಲಿ ನಡೆದ ತಲಾ ಒಂದು ಕಳವು ಪ್ರಕರಣ ಪತ್ತೆಯಾಗಿವೆ.
‘ಇದೇ 21ರಂದು ರಾತ್ರಿ 10.30ರ ಸುಮಾರಿಗೆ ಮುತ್ಯಾಲನಗರದ ಹರಿದಾಸನ್ ಎಂಬುವರ ಮನೆ
ಯಿಂದ ಚಿನ್ನಾಭರಣ ಕಳವು ಆಗಿತ್ತು. ಉದಯ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬಯಲಿಗೆ ಬಂದಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.