ನಗರದಲ್ಲಿ ಸೋಮವಾರ ಆಯೋಜಿಸಿದ್ದ ನಾಗರಿಕರ ಹಕ್ಕು ರಕ್ಷಣಾ ದಿನ ಕಾರ್ಯಕ್ರಮದಲ್ಲಿ ಸಚಿವ ಡಾ.ಎಚ್. ಸಿ. ಮಹದೇವಪ್ಪ ಮತ್ತು ಇಂದಿರಾ ಕೃಷ್ಣಪ್ಪ ಚರ್ಚೆ ನಡೆಸಿದರು. ವೆಂಕಟೇಶಯ್ಯ, ಮಾವಳ್ಳಿ ಶಂಕರ್, ಪ್ರೊ. ನಟರಾಜ ಹುಳಿಯಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ.
ಬೆಂಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ‘ಒಂದು ದೇಶ, ಒಂದು ಚುನಾವಣೆ’ ಎಂಬ ಪರಿಕಲ್ಪನೆ ಎಲ್ಲಿಂದ ಬಂತು? ಈ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ನಾಗರಿಕ ಹಕ್ಕು ರಕ್ಷಣಾ ದಿನದಲ್ಲಿ ಅವರು ಮಾತನಾಡಿದರು.
ವಿವಿಧ ಜಾತಿ, ಮತ, ಪಂಥಗಳನ್ನು ಹೊಂದಿರುವ ಬಹುತ್ವದ ದೇಶ ಭಾರತದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಮೂಢನಂಬಿಕೆಗಳು ಇನ್ನೂ ಜೀವಂತವಾಗಿವೆ. ಹೀಗಿರುವಾಗ `ಒಂದು ದೇಶ ಒಂದು ಚುನಾವಣೆ` ಜಾರಿ ಕುರಿತು ಚಿಂತನೆ, ಚರ್ಚೆ ನಡೆಯಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಒಳಮೀಸಲಾತಿ ಗಣತಿ ಆರಂಭಿಸಿದ್ದು, ದಲಿತರ ಪರ ಯೋಜನೆಗಳನ್ನು ರೂಪಿಸಲು ವೈಜ್ಞಾನಿಕ ದತ್ತಾಂಶಗಳು ಬೇಕಾಗುತ್ತವೆ. ಎಡ, ಬಲ ಬದಿಗಿಟ್ಟು ಎಲ್ಲರೂ ಏಕತೆ ಸಾಧಿಸಬೇಕು ಎಂದರು.
‘ಆಪರೇಷನ್ ಸಿಂಧೂರ`ದಲ್ಲಿ ಮೇಲುಗೈ ಸಾಧಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ, ವಾಸ್ತವಾಂಶದಲ್ಲಿ ಸಂವಿಧಾನದಿಂದಲೇ ಮೇಲುಗೈ ಸಾಧಿಸಿದ್ದು ಎಂಬುದು ತಿಳಿದಿರಲಿ ಎಂದು ಅವರು ಅಭಿಪ್ರಾಯಪಟ್ಟರು.
ಪ್ರೊ.ಬಿ. ಕೃಷ್ಣಪ್ಪ ಅವರು ಹೋರಾಟದ ಶಕ್ತಿ ಆಗಿದ್ದರು. ಅವರ ವಿಚಾರಧಾರೆಗಳನ್ನು ಮೂಲೆ ಮೂಲೆಗೂ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.
ಚಿಂತಕ ನಟರಾಜ ಹುಳಿಯಾರ್ ಮಾತನಾಡಿ, ಒಳಮೀಸಲಾತಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಹೊಸ ತಲೆಮಾರು ಒಗ್ಗೂಡಿಸಲು ಕಾರ್ಯಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಬಿ. ಕೃಷ್ಣಪ್ಪ ಅವರ ಪತ್ನಿ ಇಂದಿರಾ ಕೃಷ್ಣಪ್ಪ ಮಾತನಾಡಿ, ‘ಸಮಾಜದಲ್ಲಿರುವ ಕೋಮುದಳ್ಳುರಿ ತಡೆಯಬೇಕು, ಸಮಾನತೆಗಾಗಿ ಸಂಘಟಿತರಾಗಬೇಕು, ಎಲ್ಲ ವರ್ಗದವರನ್ನು ಸೇರಿಸಿಕೊಂಡು ಹೋರಾಟಗಳನ್ನು ರೂಪಿಸಬೇಕು’ ಎಂದು ಮನವಿ ಮಾಡಿದರು.
ಇದೇ ವೇಳೆ ಇಂದಿರಾ ಕೃಷ್ಣಪ್ಪ ಅವರ `ದಾರ್ಶನಿಕ ನಮ್ಮ ಮಾರ್ಗದರ್ಶಕ` ಹಾಗೂ ಆತ್ಮಾನಂದ ಅವರ `ನನ್ನೊಳಗಿನ ಅಪ್ಪ` ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಡಿಎಸ್ಎಸ್ ಅಂಬೇಡ್ಕರ್ ವಾದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಹಿರಿಯ ಅಧಿಕಾರಿ ವೆಂಕಟೇಶಯ್ಯ, ಸಾಹಿತಿಗಳಾದ ಸುಬ್ಬು ಹೊಲೆಯರ್, ವಸುಂಧರಾ ಭೂಪತಿ, ಹುಲಿಕುಂಟೆ ಮೂರ್ತಿ, ಅರಿವು ಶಿವಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.