ADVERTISEMENT

ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:48 IST
Last Updated 7 ಜೂನ್ 2022, 19:48 IST

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ಸ್ನೇಹ ಬೆಳೆಸಿ ವಂಚಿಸುತ್ತಿದ್ದ ಆರೋಪದಡಿ ಚರಣ್‌ರಾಜ್ (34) ಎಂಬುವರನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.

‘ಕನಕಪುರದ ಚರಣ್‌ರಾಜ್, ಜೀವನ್‌ಬಿಮಾನಗರದಲ್ಲಿ ವಾಸವಿದ್ದ. ಈತನ ವಿರುದ್ಧ ಪತ್ನಿ ವರದಕ್ಷಿಣೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಈತ ಒಂಟಿಯಾಗಿ ನೆಲೆಸಿದ್ದ. ಅಕ್ರಮವಾಗಿ ಹಣ ಗಳಿಸಿ ಮೋಜು ಮಸ್ತಿ ಮಾಡಲು ವಂಚನೆಗೆ ಇಳಿದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಫೇಸ್‌ಬುಕ್ ಹಾಗೂ ಇತರೆ ಜಾಲತಾಣಗಳಲ್ಲಿ ಖಾತೆ ತೆರೆದಿದ್ದ ಆರೋಪಿ, ಜನರಿಂದ ಕಾರು, ಕ್ಯಾಮೆರಾ ಪಡೆದು ಮಾರಾಟ ಮಾಡಿ ಪರಾರಿಯಾಗಿದ್ದ. ಎರಡು ತಿಂಗಳಿನಿಂದ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಅಪರಿಚಿತ ವ್ಯಕ್ತಿಗಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ ಆರೋಪಿ, ಅದನ್ನು ಸ್ವೀಕರಿಸುತ್ತಿದ್ದಂತೆ ಚಾಟಿಂಗ್ ಮಾಡಲಾರಂಭಿಸುತ್ತಿದ್ದ. ಸ್ನೇಹ ಬೆಳೆಸಿ ಆತ್ಮಿಯನಾಗುತ್ತಿದ್ದ. ‘ತಂದೆ– ತಾಯಿಗೆ ಹುಷಾರಿಲ್ಲ. ಆಸ್ಪತ್ರೆಗೆ ಕರೆದೊಯ್ಯಬೇಕು’ ಎಂಬುದಾಗಿ ಹೇಳಿ ಕಾರು ಪಡೆಯುತ್ತಿದ್ದ. ಅದೇ ಕಾರನ್ನು ಒಎಲ್‌ಎಕ್ಸ್ ಹಾಗೂ ಇತರೆ ಜಾಲತಾಣಗಳ ಮೂಲಕ ಮಾರಾಟ ಮಾಡಿ ನಾಪತ್ತೆಯಾಗುತ್ತಿದ್ದ’ ಎಂದೂ ತಿಳಿಸಿವೆ.

‘ಪದೇ ಪದೇ ಸಿಮ್‌ಕಾರ್ಡ್‌ ಬದಲಿಸುತ್ತಿದ್ದ ಆರೋಪಿ ಬಗ್ಗೆ ಸುಳಿವು ಸಿಗುತ್ತಿರಲಿಲ್ಲ. ಫೇಸ್‌ಬುಕ್ ಬಳಕೆದಾರರ ಸೋಗಿನಲ್ಲೇ ಆರೋಪಿಯನ್ನು ಪತ್ತೆ ಮಾಡಲಾಗಿದೆ. ಆರೋ‍ಪಿಯಿಂದ 8 ಕಾರು ಹಾಗೂ ಕ್ಯಾಮೆರಾ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.