ಬೆಂಗಳೂರು: ‘ಆನ್ಲೈನ್ ಆಟಗಳ ಜೂಜಿನಿಂದ ಎಷ್ಟೋ ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ ಎಂಬ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಆನ್ಲೈನ್ ಆಟಗಳನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ’ ಎಂದು ಅಡ್ವೊಕೇಟ್ ಜನರಲ್ ಅವರು ಹೈಕೋರ್ಟ್ಗೆ ತಿಳಿಸಿದರು.
ಸರ್ಕಾರದ ನಿರ್ಧಾರ ಪ್ರಶ್ನಿಸಿ, ‘ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್’ ಮತ್ತಿತರ ಕಂಪನಿಗಳು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸುದೀರ್ಘ ವಾದ ಮಂಡನೆಯಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರು, ‘ಆನ್ಲೈನ್ ಆಟಗಳನ್ನು ನಿರ್ಬಂಧಿಸುವುದೇ ಕರ್ನಾಟಕ ಪೊಲೀಸ್ ಕಾಯಿದೆ ತಿದ್ದುಪಡಿಯ ಉದ್ದೇಶವಾಗಿದೆ’ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಉದಾಹರಣೆ ನೀಡಿದ ಅವರು, ‘ಇದು ಕೌಶಲದ ಕ್ರೀಡೆ. ಆದರೆ, ಗೊತ್ತಿಲ್ಲದ ಫಲಿತಾಂಶಕ್ಕೆ ನಾವು ಬೇರೆಯವರಿಂದ ಹಣ ಸಂಗ್ರಹ ಮಾಡಿದರೆ ಅಥವಾ ಬೆಟ್ ಕಟ್ಟಿಸಿಕೊಂಡರೆ ಅದು ಅಪರಾಧವಾಗುತ್ತದೆ. ಆನ್ಲೈನ್ ಆಟಗಳ ಮೂಲಕ ಬೆಟ್ಟಿಂಗ್ ನಡೆಸಿದರೆ ಅದು ಶಿಕ್ಷಾರ್ಹವಾಗುತ್ತದೆ’ ಎಂದು ವಿವರಿಸಿದರು.ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.