ಬೆಂಗಳೂರು: ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿ ಕಾರ್ತಿಕ್ ಅಲಿಯಾಸ್ ಗುಂಡನಿಗೆ (21) ಗುಂಡು ಹಾರಿಸಿ ನಂದಿನಿ ಬಡಾವಣೆ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.
ಕಳೆದ ಭಾನುವಾರ ರಾತ್ರಿ ಮೂರು ಸರಣಿ ಸುಲಿಗೆ ಪ್ರಕರಣಗಳು ನಡೆದಿದ್ದವು. ಇಬ್ಬರು ಸೇರಿಕೊಂಡು ಅಮಾಯಕರಿಗೆ ಚಾಕು ತೋರಿಸಿ, ಸುಲಿಗೆ ಮಾಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಬದ್ರಿ ಎಂಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗುಂಡನ ಬಗ್ಗೆ ಮಾಹಿತಿ ಸಿಕ್ಕಿತ್ತು.
ತಲೆಮರೆಸಿಕೊಂಡಿದ್ದ ಗುಂಡ ಇಲ್ಲಿನಓಕಳೀಪುರದ ಬಳಿ ಬುಧವಾರ ರಾತ್ರಿ ಕಾಣಿಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೊಲೀಸರ ತಂಡ ಸ್ಥಳಕ್ಕೆ ತೆರಳಿ, ಆರೋಪಿಯನ್ನು ಬಂಧಿಸಲು ಮುಂದಾಗಿತ್ತು.
ಈ ವೇಳೆ ಕಾನ್ಸ್ಟೆಬಲ್ ಉಮೇಶ್ ಎಂಬುವರ ಮೇಲೆ ಹಲ್ಲೆ ಮಾಡಿದ್ದ ಗುಂಡ, ತಪ್ಪಿಸಿಕೊಳ್ಳಲು ಯತ್ನಿಸಿದ್ದ.ಆಗ ಪಿಎಸ್ಐ ನಿತ್ಯಾನಂದಾಚಾರಿ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಕುಸಿದು ಬಿದ್ದ ರೌಡಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು.
‘ಆರೋಪಿ ಗುಂಡ ದರೋಡೆ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತ ಶ್ರೀರಾಂಪುರ ಠಾಣೆಯ ರೌಡಿಶೀಟರ್ ಎಂಬ ಮಾಹಿತಿ ಸಿಕ್ಕಿದೆ. ಆರೋಪಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.