ADVERTISEMENT

ಶಿಕ್ಷಕರ ಪ್ರಶಸ್ತಿಗೂ ಪದ್ಮಶ್ರೀ ಗೌರವ ಬರಲಿ: ಸಿ.ಎಸ್.ಷ‌ಡಾಕ್ಷರಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷ‌ಡಾಕ್ಷರಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 23:57 IST
Last Updated 24 ಸೆಪ್ಟೆಂಬರ್ 2025, 23:57 IST
<div class="paragraphs"><p>ನಗರದಲ್ಲಿ ಬುಧವಾರ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘ ಆಯೋಜಿಸಿದ್ದ ‘ಉತ್ತಮ ಶಿಕ್ಷಕ‘ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ&nbsp;</p></div>

ನಗರದಲ್ಲಿ ಬುಧವಾರ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘ ಆಯೋಜಿಸಿದ್ದ ‘ಉತ್ತಮ ಶಿಕ್ಷಕ‘ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ 

   

ಬೆಂಗಳೂರು: 'ಪ್ರಭಾವ ಬಳಸಿ ಪ್ರಶಸ್ತಿಗಳನ್ನು ಪಡೆಯುವುದರಿಂದ ಶಿಕ್ಷಕರು ದೂರ ಉಳಿಯಬೇಕು. ಇದರಿಂದ ಶಿಕ್ಷಕರಿಗೆ ನೀಡುವ ಪ್ರಶಸ್ತಿಗಳಿಗೂ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗೆ ಇರುವ ಗೌರವ ಬರಲಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷ‌ಡಾಕ್ಷರಿ ಹೇಳಿದರು.

ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಹಿಂದೆ ಸರ್ಕಾರ ಜನಮೆಚ್ಚಿದ ಶಿಕ್ಷಕ ಎನ್ನುವ ಪ್ರಶಸ್ತಿ ನೀಡುತ್ತಿತ್ತು. ಅರ್ಹರ ಬದಲು ಪ್ರಭಾವ ಬಳಸಿ ಪ್ರಶಸ್ತಿ ಪಡೆಯುವವರ ಸಂಖ್ಯೆ ಹೆಚ್ಚಿ ಮಾರ್ಗಸೂಚಿಗಳನ್ನು ಬದಲಾಯಿಸಿದರೂ ಪ್ರಯೋಜನವಾಗದೇ ಪ್ರಶಸ್ತಿಯನ್ನೇ ನಿಲ್ಲಿಸುವಂತಹ ಸನ್ನಿವೇಶ ನಿರ್ಮಾಣವಾಯಿತು' ಎಂದು ತಿಳಿಸಿದರು.

‘ಈಗ ಪ್ರತಿ ವರ್ಷ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಅರ್ಹರಿಗೆ ಪ್ರಶಸ್ತಿ ಸಿಗಬೇಕು ಎಂದು ಮಾನದಂಡಗಳನ್ನು ರೂಪಿಸಿ ಪ್ರಭಾವಕ್ಕೆ ಒಳಗಾಗದೇ ಆಯ್ಕೆ ಮಾಡಲಾಗುತ್ತಿದೆ. ಆಡಳಿತದಲ್ಲಿರುವವರು ಪ್ರಭಾವಕ್ಕೆ ಒಳಗಾಗದೆ ಅರ್ಹರಿಗೆ ಪ್ರಶಸ್ತಿ ಸಿಗುವಂತೆ ನೋಡಿಕೊಳ್ಳುವುದು ಒಳ್ಳೆಯದು' ಎಂದರು.

ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕಿ (ಪ್ರಾಥಮಿಕ) ಅನಿತಾ.ವಿ. ನಾಜರೆ ಮಾತನಾಡಿ, ‘ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಇಲಾಖೆ ಸಿದ್ದವಿದೆ. ಆದರೆ, ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಬೇಕು. ಬದಲಾದ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಸವಾಲು ಇರುವುದರಿಂದ ಅವರಲ್ಲಿ ಶಿಸ್ತನ್ನು ರೂಢಿಸಲು ವಿಶೇಷ ಗಮನ ನೀಡಲೇಬೇಕು. ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಒತ್ತು ನೀಡಬೇಕು‘ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ‘ನಾವು ವಿದ್ಯಾರ್ಥಿಗಳಾಗಿದ್ದಾಗ ಶಿಕ್ಷಕರು ನೀಡುತ್ತಿದ್ದ ಶಿಕ್ಷೆ, ನಮ್ಮನ್ನು ತಿದ್ದಿ, ತೀಡಿ ಸರಿದಾರಿಗೆ ತರಲು ಹಾಕುತ್ತಿದ್ದ ಶ್ರಮ ನೆನಪಿಸಿಕೊಂಡಾಗ ಅವರ ಬಗ್ಗೆ ಗೌರವ ಬರುತ್ತದೆ. ನಾವು ಈ ಹಂತಕ್ಕೆ ಬಂದಿರುವುದರ ಹಿಂದೆ ಶಿಕ್ಷಕರ ಪಾತ್ರವೇ ಹೆಚ್ಚಿನದು‘ ಎಂದು ಹೇಳಿದರು.

ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯ ಅಧ್ಯಕ್ಷತೆ ವಹಿಸಿದ್ದರು. ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್‌ ಪ್ರಧಾನ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿ.ಪಿ.ಕುಮಾರಸ್ವಾಮಿ, ಚಿನ್ನಪ್ಪರೆಡ್ಡಿ ಹಾಜರಿದ್ದರು

23 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, 31 ಹಿರಿಯ ಶಿಕ್ಷಕರರಿಗೆ ಹಿರಿಯ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.