ADVERTISEMENT

ಬೆಂಗಳೂರು: ಮಳೆ ನೀರು ತೆರವು ವೇಳೆ ವಿದ್ಯುತ್ ತಗುಲಿ ಪೇಂಟರ್ ಸಾವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 8:46 IST
Last Updated 12 ಅಕ್ಟೋಬರ್ 2021, 8:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಸೋಮವಾರ ಇಡೀ ರಾತ್ರಿ ಮಳೆ ಸುರಿದಿದ್ದು, ಇದೇ ಸಂದರ್ಭದಲ್ಲಿ ಕೆ.ಪಿ.ಅಗ್ರಹಾರದ ಮನೆಯೊಂದರಲ್ಲಿ ವಿದ್ಯುತ್ ತಗುಲಿ ವೆಂಕಟೇಶ್ ಎಂಬುವರು ಮೃತಪಟ್ಟಿದ್ದಾರೆ.

‘ಪೇಂಟರ್ ಆಗಿದ್ದ ವೆಂಕಟೇಶ್, 8ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಪತ್ನಿ ಜೊತೆ ವಾಸವಿದ್ದರು. ಪತ್ನಿ ಸಹ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರೂ ನಿತ್ಯವೂ ಕೆಲಸಕ್ಕೆ ಹೊರಗಡೆ ಹೋಗುತ್ತಿದ್ದರು. ರಾತ್ರಿಯೇ ವಾಪಸು ಬರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಸೋಮವಾರ ಮಳೆ ಜೋರಾಗಿತ್ತು. ದಂಪತಿ ರಾತ್ರಿ ಮನೆಗೆ ಬಂದಿದ್ದಾಗ, ಮನೆಯಲ್ಲೆಲ್ಲ ನೀರು ನುಗ್ಗಿತ್ತು. ವಿದ್ಯುತ್ ಸಹ ಇರಲಿಲ್ಲ. ಮಳೆ ನೀರು ನೋಡಿದ್ದ ದಂಪತಿ, ಮೊಬೈಲ್ ದೀಪದ ಬೆಳಕಿನಲ್ಲಿ ನೀರು ತೆರವು ಮಾಡಲಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಇಡೀ ಪ್ರದೇಶದಲ್ಲಿ ವಿದ್ಯುತ್ ಬಂದಿತ್ತು. ವಿದ್ಯುತ್ ದೀಪ ಆನ್‌ ಮಾಡಲೆಂದು ವೆಂಕಟೇಶ್, ಸ್ವಿಚ್ ಬೋರ್ಡ್‌ ಕಡೆ ಹೋಗಿ ಮುಟ್ಟಿದ್ದರು. ಇದೇ ಸಂದರ್ಭದಲ್ಲೇ ವಿದ್ಯುತ್ ತಗುಲಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗಾಬರಿಗೊಂಡ ಪತ್ನಿ, ಸಹಾಯಕ್ಕಾಗಿ ಚೀರಾಡಿದ್ದರು. ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲಿ ವೆಂಕಟೇಶ್ ಮೃತಪಟ್ಟಿದ್ದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.