ADVERTISEMENT

ಪಂಚಮಸಾಲಿಗಳ ಹೋರಾಟ ನ್ಯಾಯಸಮ್ಮತವಲ್ಲ: ನಟ ಚೇತನ್ ಅಹಿಂಸ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 14:40 IST
Last Updated 27 ಡಿಸೆಂಬರ್ 2022, 14:40 IST
ನಟ ಚೇತನ್ ಅಹಿಂಸ
ನಟ ಚೇತನ್ ಅಹಿಂಸ    

ಬೆಂಗಳೂರು: ‘ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳ ಹೋರಾಟ ನ್ಯಾಯಯುತವಾಗಿಲ್ಲ. ಪ್ರವರ್ಗ 3ಬಿಯಿಂದ 2ಎಗೆ ಸೇರಿಸಿ ಎಂಬ ಬೇಡಿಕೆ ಸ್ವಾರ್ಥದಿಂದ ಕೂಡಿದೆ’ ಎಂದು ನಟ ಚೇತನ್ ಅಹಿಂಸ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ವಿಚಾರದಲ್ಲಿ ಜನಪರ ಕೆಲಸ ಮಾಡಿಲ್ಲ. ಅಲ್ಲದೆ 2019ರಲ್ಲಿ ಇಡಬ್ಲ್ಯೂಎಸ್‌ ಕಾಯ್ದೆ ಜಾರಿಗೆ ತರುವ ಮೂಲಕ ಮೀಸಲಾತಿ ಉದ್ದೇಶದ ದಿಕ್ಕನ್ನು ತಪ್ಪಿಸಿದರು’ ಎಂದರು.

‘ಗಾಂಧಿ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಮೀಸಲಾತಿ ತೆಗೆಯಬೇಕೆಂದು ಪ್ರಯತ್ನಿಸಿದರು. ನೆಹರೂ 1961ರಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೀಸಲಾತಿಯನ್ನು ತೆಗೆದುಹಾಕಬೇಕು ಎಂದು ಪತ್ರ ಬರೆದಿದ್ದರು’ ಎಂದು ಆರೋಪಿಸಿದರು.

ADVERTISEMENT

‘ನಾಗಮೋಹನದಾಸ್ ವರದಿಯಂತೆ ಪರಿಶಿಷ್ಟ ಜಾತಿಗೆ ಶೇ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿಯನ್ನುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿಸಿರುವುದು ಒಳ್ಳೆಯ ಬೆಳವಣಿಗೆ. ಇದನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ತಿಳಿಸಿದರು.

‘ಬಿಜೆಪಿಯನ್ನು ಮೀಸಲಾತಿ ವಿರೋಧಿ ಎಂದು ಹೇಳುವ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯನವರ ಕೂಡುಗೆ ಏನು‘ ಎಂದು ಪ್ರಶ್ನಿಸಿದರು.

‘ಸರೋಜಿನಿ ಮಹಷಿ ವರದಿಯಂತೆ ಖಾಸಗಿ ವಲಯದಲ್ಲಿ ಭೌಗೋಳಿಕ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು. ಪ್ರವರ್ಗ 2ಎನಲ್ಲಿ ಒಳಮೀಸಲಾತಿ ಅವಶ್ಯಕತೆಯಿದೆ. ಹಾಲುಮತದ ಕುರುಬರು 2ಎ ಯಿಂದ ಪರಿಶಿಷ್ಟ ವರ್ಗದ ಸೌಲಭ್ಯ ಕೇಳುತ್ತಿರುವುದು ನ್ಯಾಯಸಮ್ಮತವಲ್ಲ’ ಎಂದರು.

‘ಒಕ್ಕಲಿಗರ ಮೀಸಲಾತಿ ಹೆಚ್ಚಿಸಲಿ’

‘ಒಕ್ಕಲಿಗರು ಮೀಸಲಾತಿ ಕೇಳುವುದರಲ್ಲಿ ನ್ಯಾಯವಿದೆ. ಶೇ 4ರಿಂದ 12ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು ಎಂಬ ಹೋರಾಟ ಒಪ್ಪಬಹುದು’ ಎಂದು ನಟ ಚೇತನ್ ಅಹಿಂಸ ಹೇಳಿದರು.

‘ಯಾವುದೇ ಸಮುದಾಯದವನರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೇಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.