ADVERTISEMENT

‘ರೈತರಿಗೆ ಮತ್ತೆ ಸಿಗದು ಭೂಮಿ’

ಪರ್ಯಾಯ ಜನತಾ ಅಧಿವೇಶನ: ಮಸೂದೆಗಳ ಪ್ರತಿ ಹರಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 22:52 IST
Last Updated 23 ಸೆಪ್ಟೆಂಬರ್ 2020, 22:52 IST
ಪರ್ಯಾಯ ಜನತಾ ಅಧಿವೇಶನದಲ್ಲಿ ಎಲ್. ಕಾಳಪ್ಪ, ಗುರುಪ್ರಸಾದ್ ಕೆರೆಗೂಡು, ವೀರ ಸಂಗಯ್ಯ, ಟಿ. ಯಶವಂತ್, ಬಿ.ಆರ್ ಪಾಟೀಲ ಮತ್ತು ವಿ. ಗಾಯತ್ರಿ ಭಾಗವಹಿಸಿದ್ದರು  ಪ್ರಜಾವಾಣಿ ಚಿತ್ರ
ಪರ್ಯಾಯ ಜನತಾ ಅಧಿವೇಶನದಲ್ಲಿ ಎಲ್. ಕಾಳಪ್ಪ, ಗುರುಪ್ರಸಾದ್ ಕೆರೆಗೂಡು, ವೀರ ಸಂಗಯ್ಯ, ಟಿ. ಯಶವಂತ್, ಬಿ.ಆರ್ ಪಾಟೀಲ ಮತ್ತು ವಿ. ಗಾಯತ್ರಿ ಭಾಗವಹಿಸಿದ್ದರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಸುಗ್ರೀವಾಜ್ಞೆ ಹಾಗೂ ಕಾಯ್ದೆಗಳ ಕುರಿತು ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಜನತಾ ಅಧಿವೇಶನ ನಡೆಸಿತು.

‘ನಮ್ಮೂರ ಭೂಮಿ, ನಮಗಿರಲಿ’ ವೇದಿಕೆಯ ವಿ. ಗಾಯತ್ರಿ, ‘ಜಲಾಶಯ ಗಳಿಗೆ, ಸರ್ಕಾರಿ ಯೋಜನೆಗಳಿಗೆ, ಕೈಗಾರಿಕೆಗಳಿಗೆ ಹಾಗೂ ಮತ್ತಿತರ ಉದ್ದೇಶಗಳಿಗೆ ಈಗಾಗಲೇ ಭೂಮಿ ಕಳೆದುಕೊಂಡಿರುವ ರೈತರ ಪಾಡು ಶೋಚನೀಯವಾಗಿದೆ. ಹೊಸ ಕಾಯ್ದೆ ಗಳಿಂದ ಅವರು ಮತ್ತೆಂದೂ ಭೂಮಿ ಪಡೆಯಲಾರರು’ ಎಂದರು.

‘ದಲಿತರ ಜಮೀನನ್ನು ಮಾರಬಾರದು. ಮಾರಿದರೂ ಅವುಗ ಳನ್ನು ಅವರಿಗೇ ಮರಳಿಸಬೇಕೆಂಬ ಕಾನೂನು ಇದೆ. ಆದರೆ, ಅದನ್ನು ಮಾಡದೆ ಅವರನ್ನು ಪುಸಲಾಯಿಸಿ ಅವರು ಜಮೀನು ಮಾರಿಕೊಳ್ಳುವಂತೆ ಮಾಡಲಾಗುತ್ತಿದೆ. ಖರೀದಿಸಿದ ಭೂಮಿ ಯನ್ನು ಹಲವು ವರ್ಷ ಖಾಲಿ ಬಿಡುವ ಬಂಡವಾಳಶಾಹಿಗಳು ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲಿದ್ದಾರೆ’ ಎಂದರು.

ADVERTISEMENT

ಕರ್ನಾಟಕ ಪ್ರಾಂತ್ಯ ರೈತ ಸಂಘದ ಟಿ. ಯಶವಂತ್, ‘ಎಪಿಎಂಸಿ ಕಾಯ್ದೆಯನ್ನು ದುರ್ಬಲಗೊಳಿಸಿ, ಎಪಿಎಂಸಿಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ’ ಎಂದರು.

ಕಾಂಗ್ರೆಸ್‌ ಮುಖಂಡ ಬಿ.ಆರ್. ಪಾಟೀಲ, ‘ರಾಜಕಾರಣದ ಅವನತಿಯಿಂದಾಗಿ ಈ ರೀತಿಯ ಜನವಿರೋಧಿ ಕಾಯ್ದೆಗಳು ಬರುತ್ತಿವೆ. ದುಷ್ಟ ರಾಜಕಾರಣಿ, ವರ್ತಕ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ನೈಸರ್ಗಿಕ ಸಂಪನ್ಮೂಲಗಳು ಕೆಲವರ ಪಾಲಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಸಂಘದ ರಮೇಶ್ ಹೂಗಾರ್, ‘ವಿದ್ಯುಚ್ಛಕ್ತಿಯ ಖಾಸಗೀಕರಣದಿಂದ ಪರೋಕ್ಷವಾಗಿ ರೈತರಿಗೆ ಅನ್ಯಾಯವಾಗಲಿದೆ.ರೈತರ ಪಂಪ್ ಸೆಟ್‌ಗಳಿಗೆ ಈಗ ಉಚಿತವಾಗಿ ವಿದ್ಯುತ್‌ ಪೂರೈಸಲಾಗುತ್ತಿದೆ. ಮುಂದೆ, ರೈತರು ಖಾಸಗಿ ಕಂಪನಿಗಳಿಗೆ ದುಬಾರಿ ಬೆಲೆ ತೆತ್ತು ವಿದ್ಯುತ್‌ ಖರೀದಿಸಬೇಕಾಗುತ್ತದೆ’ ಎಂದರು.

ರೈತರು ವಶಕ್ಕೆ: ವಿಧಾನಸಭೆಯಲ್ಲಿ ಎಪಿಎಂಸಿ ಮಸೂದೆ ಮಂಡನೆಯಾಗುತ್ತಿದ್ದಂತೆ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಪರಿಸ್ಥಿತಿ ಕೈಮೀರುವ ಸೂಚನೆ ಸಿಗುತ್ತಿದ್ದಂತೆ, ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ 32 ರೈತರನ್ನು ವಶಕ್ಕೆ ಪಡೆದರು. ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.