ADVERTISEMENT

ಕೋವಿಡ್‌ ಸೋಂಕಿತ ಕಾರ್ಮಿಕರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿ:ಪೌರಕಾರ್ಮಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 21:01 IST
Last Updated 27 ಜುಲೈ 2020, 21:01 IST
ಪುಲಿಕೇಶಿನಗರದಲ್ಲಿ  ಪೌರಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು
ಪುಲಿಕೇಶಿನಗರದಲ್ಲಿ  ಪೌರಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಪೌರಕಾರ್ಮಿಕರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಬಿಬಿಎಂಪಿ ಮತ್ತು ಸರ್ಕಾರ ನಿರ್ಲಕ್ಷ್ಯ ವಹಿಸಿವೆ. ಪೌರಕಾರ್ಮಿಕರು ಕೋವಿಡ್‌ಗೆ ಬಲಿಯಾಗುತ್ತಿದ್ದರೂ ಅವರಿಗೆ ಕನಿಷ್ಠಪಕ್ಷ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಆರೋಪಿಸಿ ಪೌರಕಾರ್ಮಿಕರು ಪುಲಿಕೇಶಿನಗರದಲ್ಲಿ ಸೋಮವಾರ ಧರಣಿ ನಡೆಸಿದರು.

ಮಾದಿಗ ದಂಡೋರಾ ಹಾಗೂ ಬಿಬಿಎಂಪಿಯ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪೌರಕಾರ್ಮಿಕರು ಪುಲಿಕೇಶಿನಗರದ ಬಿಬಿಎಂಪಿ ಕಚೇರಿಯಿಂದ ರಾಬರ್ಟ್ಸನ್‌ ರಸ್ತೆ ಬಳಿಯ ಕೋವಿಡ್‌ ವಾರ್‌ ರೂಂ ವರೆಗೆ ಮೆರವಣಿಗೆ ನಡೆಸಿದರು.

‘ಕೋವಿಡ್‌ ಸೋಂಕಿತರಾಗುತ್ತಿರುವ ಪೌರಕಾರ್ಮಿಕರ ಹಾಗೂ ದಲಿತ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದುವರೆಗೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ನಮ್ಮವರ ಆರೋಗ್ಯ ರಕ್ಷಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ಕೋವಿಡ್‌ ಪೀಡಿತ ಪೌರಕಾರ್ಮಿಕರ ಚಿಕಿತ್ಸೆ ಸಲುವಾಗಿ ವೆಂಟಿಲೇಟರ್‌ ಸೌಲಭ್ಯ ಇರುವ 200 ಹಾಸಿಗೆಗಳನ್ನು ಕಾಯ್ದಿರಿಸಬೇಕು. ಅವರ ಕೆಲಸದ ಅವಧಿಯನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

‘ಪೌರಕಾರ್ಮಿಕೆ ಪುಷ್ಪಾ ಹಾಗೂ ಬಿಬಿಎಂಪಿ ಅಟೆಂಡರ್‌ ರಘುವೇಲು ಅವರು ವೆಂಟಿಲೇಟರ್‌ ಸೌಲಭ್ಯ ಸಿಗದೆ ಕೊನೆಯುಸಿರೆಳೆದರು. ಇನ್ನಾದರೂ ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಮಾದಿಗ ದಂಡೋರಾ ಬೆಂಗಳೂರು ನಗರದ ಘಟಕದ ಅಧ್ಯಕ್ಷ ಸಿ.ದಾಸ್‌ ಒತ್ತಾಯಿಸಿದರು.

ಪೌರಕಾರ್ಮಿಕ ಸಂಘಟನೆಗಳ ಮುಖಂಡರಾದ ಡಾ.ಬಾಬು, ದಲಿತ ಸಂಘಟನೆಗಳ ಮುಖಂಡರಾದ ಶೇಖರ್‌, ರಾಜೇಂದ್ರ, ಲಕ್ಷ್ಮಣ್‌, ಮದಿ, ಪ್ರೇಮ್‌ ಕುಮಾರ್‌ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.