
ಪೀಣ್ಯ ದಾಸರಹಳ್ಳಿ: ಕಾಂಗ್ರೆಸ್ ಪಕ್ಷದಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಎಂಟು ಜನ ಆಕಾಂಕ್ಷಿಗಳಲ್ಲಿ ಶನಿವಾರ ಜಿ. ಧನಂಜಯ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಈ ಘೋಷಣೆ ಬೆನ್ನಲ್ಲೇ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಧನಂಜಯ ಅವರನ್ನು ಹೊರತುಪಡಿಸಿ ಉಳಿದ ಏಳು ಆಕಾಂಕ್ಷಿಗಳಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೂ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದು ಹೇಳಿದ್ದರು. ಆದರೆ, ಶನಿವಾರ ಏಳು ಜನ ಆಕಾಂಕ್ಷಿಗಳಲ್ಲಿ ಕೆಲವರು ಬಂಡಾಯವೆದ್ದಿದ್ದಾರೆ.
ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಕೆ. ನಾಗಭೂಷಣ್ ಮಾತನಾಡಿ, ‘ಕಾಂಗ್ರೆಸ್ ಪಕ್ಷದಿಂದ ಜಿ. ಧನಂಜಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಸಮಾಧಾನವಿಲ್ಲ. ಆದ್ದರಿಂದ, ಆಕಾಂಕ್ಷಿಗಳಾಗಿದ್ದ ಕೆಲವರು ಸೇರಿ ಒಬ್ಬರನ್ನು ಬಂಡಾಯವಾಗಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸುತ್ತೇವೆ' ಎಂದು ತಿಳಿಸಿದರು.
ಮತ್ತೊಬ್ಬ ಆಕಾಂಕ್ಷಿ ಅಭ್ಯರ್ಥಿ ಡಾ. ನಾಗಲಕ್ಷ್ಮಿ ಚೌದರಿ ಮಾತನಾಡಿ, ‘ಬಿಜೆಪಿಯಿಂದ ಬಂದಿರುವವರಿಗೆ ಟಿಕೆಟ್ ನೀಡಿರುವುದು ಅಸಮಾಧಾನವಿದೆ. ನನ್ನ ನಾಯಕತ್ವ ನೋಡಿದ ಕಾರ್ಯಕರ್ತರು, ಮುಖಂಡರು ನನ್ನ ಜೊತೆಯೇ ಇದ್ದಾರೆ. ಅವರೆಲ್ಲ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ನಮ್ಮ ನಾಯಕರಾದ ಸಿದ್ದರಾಮಯ್ಯ ಸೇರಿದಂತೆ ಉಳಿದ ನಾಯಕರ ಜತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.