ಪೀಣ್ಯದಾಸರಹಳ್ಳಿ: ಇದೇ 27 ರಿಂದ 29 ರವರೆಗೆ ಬಾಗಲಗುಂಟೆಯ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ.
ಮಾರಮ್ಮ ದೇವಿ ದೇವಸ್ಥಾನ, ಶ್ರೀವೇಣುಗೋಪಾಲ ಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿಗಳು ಜಂಟಿಯಾಗಿ ಈ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದೆ.
ಜಾತ್ರೆಯ ಅಂಗವಾಗಿ ಬಾಗಲಗುಂಟೆ, ತೋಟದಗುಡ್ಡಹಳ್ಳಿ, ಸಿಡೇದಹಳ್ಳಿ, ಎಂಇಐ ಲೇಔಟ್, ಕಿರ್ಲೋಸ್ಕರ್ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳನ್ನು ವಿದ್ಯುತ್ ದೀಪದಿಂದ ಅಲಂಕೃತಗೊಳಿಸಲಾಗಿದೆ.
ಬಾಗಲಗುಂಟೆ, ಎಂ.ಇ.ಐ ಲೇಔಟ್ನಲ್ಲಿ ಅಂಗಡಿಗಳನ್ನು ತೆರೆಯಲು ಮಳಿಗೆ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಮೈದಾನದಲ್ಲಿ ಮಕ್ಕಳ ಆಟದ ಪರಿಕರಗಳನ್ನು ಜೋಡಿಸಲಾಗುತ್ತಿದೆ.
27 ರಂದು ಗಂಗಾಪೂಜೆ. ದೇವಿಗೆ ಪುಣ್ಯಾಹ, ಕುರ್ಜಿ ಮರ ಎತ್ತುವುದು, ಮಾರಮ್ಮ ದೇವಿಯ ಮೆರವಣಿಗೆ ನಡೆಯಲಿದೆ. ರಾತ್ರಿ ಅಗ್ನಿಕುಂಡ ಹಚ್ಚುವುದು, ದೇವಿಯ ಘಟ್ಟಘಡಿಗೆ ಸಿಡೇದಹಳ್ಳಿ ಮತ್ತು ತೋಟದ ಗುಡ್ಡದಹಳ್ಳಿಗೆ ಹೊರಡುತ್ತದೆ.
28 ರಂದು ಬೆಳಿಗ್ಗೆ 8ಗಂಟೆಗೆ ಶ್ರೀವಿನಾಯಕ ಹಾಗೂ ನವಗ್ರಹಗಳಿಗೆ ಬೆಲ್ಲದ ಆರತಿ, ವೇಣುಗೋಪಾಲ ಸ್ವಾಮಿ, ಆಂಜನೇಯ ಸ್ವಾಮಿ ಹಾಗೂ ರಾಮದೇವರಿಗೆ ಬೆಲ್ಲದಾರತಿ ನಡೆಯಲಿದೆ. ಸಂಜೆ 6.30ಕ್ಕೆ ಪಳೇಕಮ್ಮ ಮತ್ತು ಮುತ್ತರಾಯ ಸ್ವಾಮಿಗೆ ಬೆಲ್ಲದಾರತಿ ನಡೆಯಲಿದೆ. ರಾತ್ರಿ 8ಕ್ಕೆ ‘ಕುರುಕ್ಷೇತ್ರ’ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಅ.29ರಂದು ಸಂಗೀತ ರಸ ಸಂಜೆ, ಬಾಗಲಗುಂಟೆಯ ಎಲ್ಲಾ ದೇವರುಗಳಿಗೂ ಮಹಾಮಂಗಳಾರತಿ ನಡೆಯಲಿದೆ ಎಂದು ಮಾರಮ್ಮ ದೇವಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.