ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ಮುಂದುವರಿಸಬೇಕೆಂದು ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ಆಗ್ರಹಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂ ಸಂಚಾಲಕ ಕೆ.ಎಲ್. ವೇಣುಗೋಪಾಲ್, ‘ದೇಶದಲ್ಲಿ ಯಾವ ರಾಜ್ಯಗಳು ಎನ್ಇಪಿಯನ್ನು ತೆಗೆದು ಹಾಕಿದ ನಿದರ್ಶನಗಳಿಲ್ಲ. ಆದರೆ, ರಾಜ್ಯದಲ್ಲಿ ಮಾತ್ರ ಎನ್ಇಪಿಯನ್ನು ತೆಗೆದು ಹಾಕಿ ರಾಜ್ಯ ಶಿಕ್ಷಣ ನೀತಿ ತರಲಾಗುತ್ತಿದೆ. ಫೋರಂ ಮೂಲಕ ಎನ್ಇಪಿಯನ್ನು ಮುಂದುವರಿಸಬೇಕೆಂದು ರಾಜ್ಯದಾದ್ಯಂತ ಜಾಗೃತಿ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು’ ಎಂದು ತಿಳಿಸಿದರು.
‘ಜಾಗೃತಿ ಮತ್ತು ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 2,630 ಶಾಲಾ–ಕಾಲೇಜುಗಳ 86,600 ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಿಬ್ಬಂದಿ, 26,980 ಪೋಷಕರು, 8,88,173 ವಿದ್ಯಾರ್ಥಿಗಳು, ಆನ್ಲೈನ್ ಮೂಲಕ 19,327 ಜನ ಸೇರಿ ಒಟ್ಟು 10,16,080 ಮಂದಿ ಎನ್ಇಪಿ ಮುಂದುವರಿಸುವಂತೆ ಸಹಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್, ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷ ದ್ವಾರಕಾನಾಥ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.