ಕೆ.ಆರ್.ಪುರ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಉದ್ದೇಶಿತ ಪೆರಿಫೆರಲ್ ವರ್ತುಲ ರಸ್ತೆ (ಬೆಂಗಳೂರು ಬಿಸಿನೆಸ್ ಕಾರಿಡಾರ್) ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನುಗಳಿಗೆ ದರ ನಿಗದಿ ಸಂಬಂಧ ಭೂ ಮಾಲೀಕರೊಂದಿಗೆ ಭೂ ಸ್ವಾಧೀನ ಅಧಿಕಾರಿಗಳು ಹಿರಂಡಹಳ್ಳಿಯಲ್ಲಿ ದರ ಸಂಧಾನ ಸಭೆ ನಡೆಸಿದರು.
ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗೆ ಜಮೀನು ಕಳೆದುಕೊಳ್ಳುವ ಮಾಲೀಕರೊಂದಿಗೆ ಹಿರಂಡಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ದರ ಸಂಧಾನ ಸಭೆಗೆ ಜಮೀನ್ದಾರರು ವಿರೋಧ ವ್ಯಕ್ತಪಡಿಸಿದರು.
2007ರಲ್ಲಿ ಪಿಆರ್ಆರ್ ಯೋಜನೆಯ ಅಧಿಸೂಚನೆ ಹೊರಡಿಸಿ 20 ವರ್ಷವಾದ ನಂತರ ಮತ್ತೆ ಯೋಜನೆ ಜಾರಿ ಮಾಡುವುದಾಗಿ ಬಂದಿದ್ದಾರೆ. ರೈತರ ಕಷ್ಟ ಅರ್ಥ ಮಾಡಿಕೊಂಡು ನಮ್ಮ ಜಮೀನಿಗೆ ಸೂಕ್ತ ಪರಿಹಾರ ಕೊಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕು. ಹಳೇ ಕಾಯ್ದೆ ಪ್ರಕಾರ ಭೂ ಪರಿಹಾರ ಬೇಡ, ಹಿರಂಡಹಳ್ಳಿಯಲ್ಲಿ 90ರಷ್ಟು ರೈತರು ಜಮೀನು ಕಳೆದುಕೊಳ್ಳುತ್ತಿದ್ದಾರೆ. 200 ರೈತರ ಭೂಮಿ ಸ್ವಾಧೀನವಾಗುತ್ತಿದೆ ಎಂದು ರೈತ ಮುಖಂಡ ಹೆಚ್.ಎನ್ ಜಗನಾಥ್ ದೂರಿದರು.
ಹೆಚ್ಚುವರಿ ಉಪ ಆಯುಕ್ತ ಕೆ.ಎಚ್.ಜಗದೀಶ್ ಮಾತನಾಡಿ, ಯೋಜನೆಗಾಗಿ 2007ರಲ್ಲಿ 78 ಎಕರೆ 23 ಗುಂಟೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಮಾರ್ಗಸೂಚಿಯ ದರದ ಪ್ರಕಾರ ಎಕರೆಗೆ 1 ಕೋಟಿ 99 ಲಕ್ಷ ನಿಗದಿಯಾಗಿತ್ತು. ಈಗ ಹೊಸ ಮಾನದಂಡದ ಮೇಲೆ 5 ಕೋಟಿ 99 ಲಕ್ಷ ದರ ನಿಗದಿಯಾಗಿದೆ. ಸಂಧಾನಿತ ಸಭೆ ನಡೆಸಿ ಒಪ್ಪಿಗೆ ಪತ್ರ ಪಡೆಯಲು ಬಂದಿದ್ದೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಜಗನಾಥ್, ರೈತರಾದ ಕೆಂಪರಾಜು, ನಾರಾಯಣಸ್ವಾಮಿ, ಮುಕುಂದ್, ರಾಮಾಂಜಿ, ರಾಮಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.