ADVERTISEMENT

ಪಠ್ಯಕ್ರಮದಲ್ಲಿ ಬದಲಾವಣೆ ಅಗತ್ಯ: ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 16:42 IST
Last Updated 13 ಜುಲೈ 2023, 16:42 IST
ಸಮ್ಮೇಳನವನ್ನು ಎಂ.ಆರ್. ದೊರೆಸ್ವಾಮಿ ಉದ್ಘಾಟಿಸಿದರು. ಎಂ.ಎಲ್. ಮುಂಜಾಲ್, ಎಸ್.ಪಿ. ಸಿಂಗ್ ಹಾಗೂ ಪ್ರೊ.ಡಿ.ಜವಾಹರ್ ಇದ್ದಾರೆ.
ಸಮ್ಮೇಳನವನ್ನು ಎಂ.ಆರ್. ದೊರೆಸ್ವಾಮಿ ಉದ್ಘಾಟಿಸಿದರು. ಎಂ.ಎಲ್. ಮುಂಜಾಲ್, ಎಸ್.ಪಿ. ಸಿಂಗ್ ಹಾಗೂ ಪ್ರೊ.ಡಿ.ಜವಾಹರ್ ಇದ್ದಾರೆ.   

ಬೆಂಗಳೂರು: ‘ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಪಠ್ಯ ಕ್ರಮದಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ತಿಳಿಸಿದರು. 

ವಿಶ್ವವಿದ್ಯಾಲಯ ನಗರದಲ್ಲಿ ಗುರುವಾರ ಹಮ್ಮಿಕೊಂಡ 21ನೇ ‘ಅಡ್ವಾನ್ಸ್‌ಸ್‌ ಇನ್‌ ಮೆಕಾನಿಕಲ್ ಎಂಜಿನಿಯರಿಂಗ್’ ಕುರಿತ ಐಎಸ್‌ಎಂಇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಮಾತನಾಡಿದರು.

‘ಇಂತಹ ಸಮ್ಮೇಳನವನ್ನುಕೇವಲ ಸಿದ್ಧಾಂತಕ್ಕೆ ಸೀಮಿತಗೊಳಿಸದೆ, ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸುವಲ್ಲಿ ಕೈಗಾರಿಕೆಗಳ ಒಳಗೊಳ್ಳುವಿಕೆಯನ್ನು ಚರ್ಚಿಸಬೇಕು. ಐಐಎಸ್ಸಿ ಮತ್ತು ಐಐಟಿಯಂತಹ ಸಂಸ್ಥೆಗಳ ಸಹಾಯದಿಂದ ಸಂಶೋಧನೆ ಹಾಗೂ ಅಭಿವೃದ್ಧಿಯತ್ತ ಗಮನಹರಿಸಬೇಕು’ ಎಂದರು.

ADVERTISEMENT

ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಪ್ರೊ.ಡಿ.ಜವಾಹರ್, ‘ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿವೆ. ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಉತ್ಕೃಷ್ಟತಾ ಕೇಂದ್ರ ತೆರೆಯಲು ಐಐಟಿ ಮದ್ರಾಸ್‌ಗೆ ಮುಕ್ತ ಅವಕಾಶವಿದೆ’ ಎಂದು ಹೇಳಿದರು. 

ಉದ್ಯಮ ಕ್ಷೇತ್ರದ ತಜ್ಞರಾದ ಎಂ.ಎಲ್. ಮುಂಜಾಲ್ ಮತ್ತು ಎಸ್.ಪಿ. ಸಿಂಗ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡು, ‘ಯುವ ಎಂಜಿನಿಯರ್‌ಗಳು ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.