ಬೆಂಗಳೂರು: ಹೊಸಕೋಟೆಯ ವಾಗಟ ಕ್ರಾಸ್ನಿಂದ ದೇವನಗುಂದಿ ರೈಲ್ವೆ ಗೇಟ್ವರೆಗಿನ ರಸ್ತೆ ಹದಗೆಟ್ಟಿದ್ದು, ಅದರ ದುರಸ್ತಿಗಾಗಿ ಕರ್ನಾಟಕ ತೈಲ ಸಾಗಣೆ ಚಾಲಕರು ಹಾಗೂ ಕ್ಲೀನರ್ ಒಕ್ಕೂಟ 21 ದಿನಗಳ ಗಡುವು ನೀಡಿದೆ. ದುರಸ್ತಿ ಮಾಡದಿದ್ದರೆ, ತೈಲ ಹಾಗೂ ಅನಿಲ ಸಾಗಣೆ ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.
ಭಾರತೀಯ ತೈಲ ನಿಗಮದ (ಐಒಸಿಎಲ್) ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿರುವ ಒಕ್ಕೂಟದ ಅಧ್ಯಕ್ಷ ಶ್ರೀರಾಮ್, ‘ತೈಲ ಕಂಪನಿಗಳಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಹೋಗುತ್ತಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಗುಣಮಟ್ಟದ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಮುಂದಾಗುವ ನಷ್ಟಕ್ಕೆ ನೀವೇ ಹೊಣೆಗಾರರು’ ಎಂದು ಹೇಳಿದ್ದಾರೆ.
‘ಭಾರತೀಯ ತೈಲ ನಿಗಮ, ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಎಲ್ಪಿಜಿ ಘಟಕಗಳುದೇವನಗುಂದಿಯಲ್ಲಿವೆ. ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಿಗೆ ನಿತ್ಯ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ಸಾವಿರಕ್ಕೂ ಹೆಚ್ಚು ಲೋಡ್ತೈಲ ಹಾಗೂ ಅನಿಲ ಪೂರೈಕೆ ಆಗುತ್ತದೆ. ಆದರೆ, ಟ್ಯಾಂಕರ್ಗಳು ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಚಾಲಕರು ಜೀವ ಭಯದಲ್ಲಿ ಟ್ಯಾಂಕರ್ ಓಡಿಸುತ್ತಿದ್ದಾರೆ’ ಎಂದು ಶ್ರೀರಾಮ್ ಹೇಳಿದ್ದಾರೆ.
‘ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಹೋರಾಟ ಮಾಡಿದ್ದೇವೆ. ಅಧಿಕಾರಿಗಳು, ಕಾಟಾಚಾರಕ್ಕೆ ಎಂಬಂತೆ ಕೆಲಸ ಮಾಡಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಈ ಬಾರಿ ಗುಣಮಟ್ಟದ ರಸ್ತೆ ನಿರ್ಮಿಸುವವರೆಗೆ ಮುಷ್ಕರ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕಿತ್ತು ಹೋದ ಡಾಂಬರ್: ‘ಕಳೆದ ಬಾರಿ ಹೋರಾಟ ನಡೆಸಿದಾಗ ಅಲ್ಪಸ್ವಲ್ಪ ಕೆಲಸ ಆಗಿತ್ತು. ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿದ್ದ ಡಾಂಬರ್ ಕಿತ್ತು ಹೋಗಿದೆ’ ಎಂದು ಶ್ರೀರಾಮ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.