ಕೆಂಗೇರಿ: ಹಲವು ವರ್ಷಗಳಿಂದ ದೈಹಿಕ ಶಿಕ್ಷಕ ಶಿಕ್ಷಣ ವಿಭಾಗ ಹಾಗೂ ಕ್ರೀಡಾಪಟುಗಳಿಗೆ ಸೂಕ್ತ ಆರ್ಥಿಕ ನೆರವು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕರು ಒಕ್ಕೊರಲಿನಿಂದ ದೂರಿದರು.
ಇದರಿಂದಾಗಿ, ಬೆಂಗಳೂರು ವಿ.ವಿಯಲ್ಲಿ ಬುಧವಾರ ನಡೆದ ಅಂತರ ವಿಶ್ವವಿದ್ಯಾಲಯ ಚಾಂಪಿಯನ್ಶಿಪ್ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಗೊಂದಲದ ಗೂಡಾಯಿತು.
ಪ್ರಶಸ್ತಿ ಪ್ರದಾನದ ವೇಳೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಲು ಮುಂದಾದ ವಿಶ್ವವಿದ್ಯಾಲಯದ ಕಾಲೇಜು ದೈಹಿಕ ಶಿಕ್ಷಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ಬಿ.ಟಿ.ನಾಗೇಂದ್ರ ಕುಮಾರ್ ಹಾಗೂ ಉಪಾಧ್ಯಕ್ಷ ಡಾ.ಬಸವಯ್ಯ ಕೆ.ಎಂ., ‘ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೂ ಅಗತ್ಯ ತರಬೇತಿ ಹಾಗೂ ಆರ್ಥಿಕ ನೆರವು ಸಿಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಿದ್ದ ಪ್ರತಿಭೆಗಳು ಹೇಳ ಹೆಸರಿಲ್ಲದಂತಾಗುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿರುವ ಕ್ರೀಡಾಂಗಣಗಳಲ್ಲೇ ಮೂಲ ಸೌಕರ್ಯ ಕೊರತೆ ತಾಂಡವವಾಡುತ್ತಿದೆ’ ಎಂದು ದೂರಿದರು.
100 ಮೀ. ರಸ್ತೆ ಓಟ, 500 ಮೀ. ರಿಂಕ್ ರೇಸ್ ಹಾಗೂ 1000 ಮೀ. ರಿಂಕ್ ರೇಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ ಕರ್ನಾಟಕ ಚಿತ್ರ ಕಲಾಪರಿಷತ್ನ ಮೌನ ಬಾಬು ಹಾಗೂ ಬೆಳ್ಳಿ ಪದಕ ಪಡೆದ ಸುರಾನ ಕಾಲೇಜಿನ ವಿದ್ಯಾರ್ಥಿ ಉಜ್ವಲ್ ನಾಯ್ಡು ಸಿ. ಸೇರಿದಂತೆ ವಿದ್ಯಾರ್ಥಿಗಳನ್ನು ಕೆ.ಆರ್.ವೇಣು ಗೋಪಾಲ್ ಸನ್ಮಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.